ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯದಿಂದ ಬಾಂಗ್ಲಾ ಹಾಗೂ ಪಾಕಿಸ್ಥಾನಕ್ಕೆ ಪ್ಯಾರಲಲ್ ದೂರವಾಣಿ ವ್ಯವಸ್ಥೆಗಳ ಮೂಲಕ ಅತೀ ಹೆಚ್ಚು ಕರೆಗಳು ವಿನಿಮಯವಾಗುತ್ತಿದ್ದು, ಕೇಂದ್ರ ಗುಪ್ತಚರ ಇಲಾಖೆ ನೀಡಿದ ಎಚ್ಚರಿಕೆಯ ಬೆನ್ನಿಗೇ ಇದರ ತನಿಖೆ ಸಾರಥ್ಯವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶೀಘ್ರವೇ ವಹಿಸಿಕೊಳ್ಳಲಿದೆ.
ಈ ದೂರವಾಣಿ ಕರೆಗಳು ಹೆಚ್ಚಾಗಿ ಇತರ ರಾಜ್ಯಗಳಿಂದ ಹಾಗೂ ಬಾಂಗ್ಲಾದೇಶದಿಂದ ವಲಸೆಬಂದ ಕಾರ್ಮಿಕರ ಹೆಸರಿನಲ್ಲಿ ವಿನಿಮಯವಾಗುತ್ತಿದೆ. ಇದರ ಹಿಂದೆ ಬೇಹುಗಾರಿಕೆ, ಭಯೋತ್ಪಾದನೆ ಷಡ್ಯಂತ್ರ ಇರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ರಾಜ್ಯದ 14 ಪೋಲೀಸ್ ಠಾಣೆಗಳಲ್ಲಿ ಈಗಾಗಲೇ ಒಟ್ಟು 20 ಇಂತಹ ಪ್ರಕರಣ ದಾಖಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ತನಿಖೆಯನ್ನು ಎನ್ಐಎಗೆ ಹಸ್ತಾಂತರಿಸಿದೆ. ಇದೀಗ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದ ಬೆನ್ನಿಗೇ ಎನ್ಐಎ ಸಮಗ್ರ ತನಿಖೆ ಆರಂಭಿಸಲಿದೆ.
ಅಂತಾರಾಷ್ಟ್ರೀಯ ಇಂಟರ್ನೆಟ್ ವ್ಯವಸ್ಥೆಯನ್ನು ಬೈಪಾಸ್ ಮಾಡುವ ಮೂಲಕ ಈ ಪ್ಯಾರಲಲ್ ದೂರವಾಣಿ ವಿನಿಮಯ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಸಷಿಯಲ್ ಮೀಡಿಯಾ ಗ್ರೂಪ್ಗಳಲ್ಲಿ ಸಕ್ರಿಯರಾಗಿದ್ದ ಕೆಲವರು ಈ ವ್ಯವಸ್ಥೆಯ ಮೂಲಕ ಬಾಂಗ್ಲಾದೇಶ ಪೋನ್ ಕರೆಗಳನ್ನು ಮಾಡಿದ್ದು ಆತಂಕ ಹೆಚ್ಚಿಸಿದೆ.