ಹೊಸದಿಗಂತ ವರದಿ,ಕಲಬುರಗಿ:
ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಶೂಟ್ ಮಾಡಲು ಸಿದ್ದ ಎಂದಿದ್ದ, ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನು ಬ್ರಹ್ಮಪುರ ಪೊಲೀಸ್ ಠಾಣೆಯ ಪೊಲೀಸರು ಹೈದ್ರಾಬಾದನಲ್ಲಿ ವಶಕ್ಕೆ ಪಡೆದು ಕಲಬುರಗಿಗೆ ಸೋಮವಾರ ಬೆಳಿಗ್ಗೆ ಕರೆತಂದಿದ್ದಾರೆ.
ನಾನು ದೇಶ ಕಾಯುವ ಸೈನಿಕನಂತೆ ಪ್ರೀಯಾಂಕ್ ಖರ್ಗೆ ಅವರು ನಮ್ಮ ಮೇಲೆ ಗುಂಡು ಹೊಡೆದರೂ ಎದುರಿಸಲು ಸಿದ್ದ, ಅವರನ್ನು ಶೂಟ್ ಮಾಡಲೂ ಸಿದ್ದ ಎಂದು ಮಣಿಕಂಠ ರಾಠೋಡ್ ವಿವಾದಿತ ಹೇಳಿಕೆ ನೀಡಿದ ಪರಿಣಾಮ ಜಿಲ್ಲಾ ಕಾಗ್ರೇಸ್ ಮುಖಂಡರು ರಾಠೋಡ್ ಬಂಧನಕ್ಕೆ ಬಾರಿ ಪ್ರತಿಭಟನೆ ನಡೆಸಿದರು.
ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸುತ್ತಿದ ಹಿನ್ನೆಲೆ ಕಾಂಗ್ರೆಸ್ ಮುಖಂಡರು ಸಿಎಂಗೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶನದ ಎಚ್ಚರಿಕೆ ನೀಡಿದರು. ಅಲ್ಲದೇ, ಬ್ರಹ್ಮಪುರ ಠಾಣೆಯಲ್ಲಿ ರಾಠೋಡ ವಿರುದ್ಧ ಜೀವ ಬೇದರಿಕೆ ಪ್ರಕರಣ ಸಹ ದಾಖಲಾಗಿತ್ತು. ಹೀಗಾಗಿ ಸಿಎಂ ಆಗಮನಕ್ಕೂ ಮುನ್ನವೇ ಮಣಿಕಂಠ ರಾಠೋಡ್ನನ್ನು ಭಾನುವಾರ ಮಧ್ಯರಾತ್ರಿ ಪೊಲೀಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.