ವಿಪಕ್ಷಗಳ ಒಕ್ಕೂಟಕ್ಕೆ ಸಂಚಾಲಕರನ್ನೇ ಆಯ್ಕೆ ಮಾಡಲಾಗುತ್ತಿಲ್ಲ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ವಿಪಕ್ಷಗಳ ‘ಇಂಡಿ’ (ಐಎನ್‍ಡಿಐ) ಒಕ್ಕೂಟಕ್ಕೆ ಸಂಚಾಲಕರನ್ನೇ ಆಯ್ಕೆ ಮಾಡಲಾಗುತ್ತಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟರು. ಇಂಡಿ ಒಕ್ಕೂಟವು ಅಸ್ತಿತ್ವದಲ್ಲೇ ಇಲ್ಲ. ಆರಂಭದಲ್ಲಿ ಅದು ಪ್ರಧಾನಿ ಸ್ಥಾನಕ್ಕೆ ಹಲವಾರು ಹೆಸರುಗಳನ್ನು ಪ್ರಸ್ತಾಪ ಮಾಡಿತ್ತು. ಬಳಿಕ ಅವರು ಪರಸ್ಪರರನ್ನು ಸೂಚಿಸಿದರು. ಇನ್ನೊಂದೆಡೆ ಅವರಿಗೆ ಸ್ಥಾನ ಹಂಚಿಕೆ ಕಡೆಗೇ ಗಮನ ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.

ಭಾರತದ ಸಮಗ್ರ ಬೆಳವಣಿಗೆ ಶೇ 5ರಷ್ಟೇ ಇರುತ್ತದೆ ಎಂದು ಕಾಂಗ್ರೆಸ್ಸಿಗರು ಹೇಳಿದ್ದರು. ಆದರೆ, ಅದು ಶೇ 7.6 ಕ್ಕೂ ಹೆಚ್ಚು ಇರುವುದನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ; ಅವರು ಹತಾಶರಾಗಿದ್ದಾರೆ ಎಂದು ಅವರು ಉತ್ತರಿಸಿದರು.

ಜಗತ್ತಿನೆಲ್ಲೆಡೆ ಪೆಟ್ರೋಲಿಯಂ ಉತ್ಪನ್ನಗಳ ದರ ಏರುತ್ತಿದೆ. ಮೋದಿಜೀ ಅವರು ಎರಡು ಬಾರಿ ಪೆಟ್ರೋಲಿಯಂ ಉತ್ಪನ್ನಗಳ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡಿದ್ದಾರೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಳೆದ 2 ವರ್ಷಗಳಲ್ಲಿ ಕಡಿಮೆ ಆಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತಿತರ ಕಡೆ ಇದಕ್ಕೆ ಕಾಂಗ್ರೆಸ್ಸಿಗÀರಿಗೆ ಸೂಕ್ತ ಉತ್ತರ ಸಿಕ್ಕಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಮೇಲೆ ನಾವು ಗಮನ ಹರಿಸಿದ್ದೇವೆ. ಮೋದಿಜೀ ಮಾದರಿ, ಕೇಂದ್ರದ ಯೋಜನೆಗಳಷ್ಟೇ ನಮಗೆ ಪೂರಕವಾಗಿ ಕೆಲಸ ಮಾಡಲಿವೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಮೇ ವೇಳೆಗೆ 45 ಸಾವಿರ ಬ್ಯಾರೆಲ್ ಕಚ್ಚಾ ತೈಲ (ಶೇ 7ರಷ್ಟು ಪೆಟ್ರೋಲಿಯಂ ಉತ್ಪನ್ನ) ಶೇ 7ರಷ್ಟು ಗ್ಯಾಸ್ ಉತ್ಪಾದನೆಗೆ ಭಾರತ ಮುಂದಾಗಿದೆ. ಇಂಥ ಸುದ್ದಿಗಳಿಗೆ ಆದ್ಯತೆ ಕೊಡಿ ಎಂದು ಅವರು ವಿನಂತಿಸಿದರು.

2016ರಲ್ಲಿ ಆರಂಭವಾದ ಉಜ್ವಲ ಯೋಜನೆಯಡಿ 10.50 ಕೋಟಿ ಜನರಿಗೆ ಎಲ್‍ಪಿಜಿ ಸಿಲಿಂಡರ್ ಸಂಪರ್ಕ ಕೊಡಲಾಗಿದೆ. ಆವಾಸ್ ಯೋಜನೆಯಡಿ ಮಹಿಳೆಯರಿಗೆ ಆದ್ಯತೆ ಕೊಡಲಾಗಿದೆ. 11 ಕೋಟಿ ಶೌಚಾಲಯ ಕಟ್ಟಿಸಿ ಕೊಡಲಾಗಿದೆ. ಮಹಿಳೆಯರಿಗೆ ಶೇ 33 ರಾಜಕೀಯ ಮೀಸಲಾತಿ ಕೊಡಲಾಗುತ್ತಿದೆ. ಇದಕ್ಕೆ ಮಹಿಳೆಯರೂ ಪೂರ್ಣ ಪ್ರಮಾಣದಲ್ಲಿ ಸಿದ್ಧರಾಗುತ್ತಿದ್ದಾರೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಜೀಯವರ ನೇತೃತ್ವದ ಬಿಜೆಪಿ ಕೇಂದ್ರ ಸರಕಾರದ ಯೋಜನೆಗಳಾದ ಉಜ್ವಲ, ಆಯುಷ್ಮಾನ್ ಭಾರತ್ ಮತ್ತಿತರ ಯೋಜನೆಗಳ ಪರಿಚಯ ಮತ್ತು ಫಲಾನುಭವಿಗಳ ಜೊತೆ ಸಂವಾದ ನಡೆದಿದೆ. ಯೋಜನೆಯಡಿ ಈಗ 11 ಕೋಟಿ ಜನರು ಜೋಡಿಸಿಕೊಂಡಿದ್ದು, ಇನ್ನಷ್ಟು ಫಲಾನುಭವಿಗಳನ್ನು ಜೋಡಿಸುವ ಉದ್ದೇಶ ಇದರಡಿ ಇದೆ. ವಿಕಸಿತ ಭಾರತ ಸಂಕಲ್ಪ ಯಾತ್ರೆಗಾಗಿ ಕೇರಳದಲ್ಲಿ ಪ್ರವಾಸ ಮಾಡಿದ್ದೇನೆ. ಮೊನ್ನೆಯಿಂದ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದೇನೆ ಎಂದು ವಿವರಿಸಿದರು.

ಗ್ಯಾಸ್ ಕನೆಕ್ಷನ್ 2014ರಲ್ಲಿ 14 ಕೋಟಿ ಇದ್ದುದು, ಈಗ 32 ಕೋಟಿಗೇರಿದೆ. ಕಂಪ್ರೆಸ್‍ಡ್ ಬಯೋಗ್ಯಾಸ್ ಸೌಲಭ್ಯವನ್ನೂ ಕೊಡಲಾಗಿದೆ. ನಮೋ ಆ್ಯಪ್ ಮೂಲಕ ಮಾಹಿತಿ ಪಡೆಯುವುದಲ್ಲದೆ, ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶವಿದೆ ಎಂದರು.

ಮಾಲ್ಡೀವ್ಸ್ ಸಚಿವರ ಹೇಳಿಕೆಯಿಂದ ಪ್ರಭಾವ ಆಗಿದೆ. ಚುನಾವಣೆ ಪದೇಪದೇ ಬರುತ್ತದೆ. ಒಂದು ದೇಶ ಒಂದು ಚುನಾವಣೆ ಪ್ರಯತ್ನ ನಡೆದಿದೆ ಎಂದು ಪ್ರಶ್ನೆಗೆ ಉತ್ತರಿಸಿದ ಅವರು, ಸನಾತನ ಧರ್ಮದ ಕುರಿತ ಟೀಕೆಗಳ ಕುರಿತು ಕೂಡ ಪ್ರಸ್ತಾಪಿಸಿದರು.

ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ.ಮೋಹನ್, ರಾಷ್ಟ್ರೀಯ ವಕ್ತಾರರಾದ ಜಾಫರ್ ಇಸ್ಲಾಂ, ತೂಹಿನ್ ಸಿನ್ಹಾ, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!