ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ಅಪಘಾತಕ್ಕೆ ಒಳಗಾಗಿದ್ದ ಶಾಲಿಮಾರ್ – ಕೋರ್ಮಂಡಲ್ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ಭೀಕರ ರೈಲು ಅಪಘಾತದ ಬಳಿಕ ಕೋರಮಂಡಲ್ ಎಕ್ಸ್ಪ್ರೆಸ್ನ ಸೇವೆ ಇಂದಿನಿಂದ ಪುನಾರಂಭವಾಗಲಿದೆ.
ಜೂನ್ 2 ರಂದು ಬಾಲಸೋರ್ನ ಬಹನಾಗಾ ರೈಲು ನಿಲ್ದಾಣದ ಬಳಿ ಶಾಲಿಮಾರ್ – ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್, ಸರಕು ಸಾಗಾಣಿಕ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಳಿತಪ್ಪಿದ ಬೋಗಿಗಳು ಪಕ್ಕದ ಟ್ರಾಕ್ಗೆ ಬಿದ್ದಿದ್ದವು. ಆಗ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಹೌರಾ ಎಕ್ಸ್ಪ್ರೆಸ್ ಸಹ ಹಳಿ ತಪ್ಪಿ, ಭೀಕರ ದುರಂತ ಸಂಭವಿಸಿತ್ತು. ಈ ಘಟನೆಯಲ್ಲಿ ಸುಮಾರು 275 ಪ್ರಯಾಣಿಕರು ಮೃತಪಟ್ಟು, 1100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರಲ್ಲಿ 700ಕ್ಕೂ ಹೆಚ್ಚು ಮಂದಿ ತುರ್ತು ಚಿಕಿತ್ಸೆ ಪಡೆದು ತಮ್ಮ ಮನೆಗಳಿಗೆ ತೆರಳಿದ್ದರು.
ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ‘ವಿದ್ಯುನ್ಮಾನ ಇಂಟರ್ಲಾಕಿಂಗ್ನಲ್ಲಿನ ಬದಲಾವಣೆಯಿಂದ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದರು.
ದುರ್ಘಟನೆ ನಡೆದ ಸ್ಥಳದಲ್ಲಿ ಸೋಮವಾರವೇ ರೈಲುಗಳ ಓಡಾಟ ಶುರುವಾಗಿದೆ. ಘಟನೆ ನಡೆದ 51 ಗಂಟೆಗಳಲ್ಲೇ ಹದಗೆಟ್ಟ ರೈಲು ಹಳಿಗಳನ್ನ ಸರಿ ಪಡಿಸಿ ಪ್ಯಾಸೆಂಜರ್ ರೈಲು ಸೇವೆಗಳನ್ನು ಪುನಾರಂಭಿಸಲಾಗಿತ್ತು. ಅದಾದ ಬಳಿಕ ಹೌರಾ – ಪುರಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಒಡಿಶಾದ ಬಾಲಸೋರ್ನಲ್ಲಿ ಪುನಃಸ್ಥಾಪಿಸಲಾದ ರೈಲ್ವೆ ಹಳಿಗಳ ಮೇಲೆ ಸಂಚರಿಸಿದೆ.