ಹೊಸದಿಗಂತ ವರದಿ ಬೆಳಗಾವಿ:
ಇಲ್ಲಿನ ಮಹಾನಗರ ಪಾಲಿಕೆ ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಮಧ್ಯದ ಜಟಾಪಟಿ ರಾಜ್ಯ ರಾಜಧಾನಿಗೆ ಶಿಫ್ಟ್ ಆಗಿದೆ.
ಪಾಲಿಕೆಯಲ್ಲಿ ಠರಾವುಗಳ ತಿದ್ದುಪಡಿ ಆರೋಪ, ಮೇಯರ್ ಸಹಿ ಒಳಗೊಂಡಿರುವ ಕಡತಗಳ ನಾಪತ್ತೆ ಕುರಿತಂತೆ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆಯುತ್ತಿದ್ದು, ಸಾಮಾನ್ಯ ಸಭೆ ಈ ಗಲಾಟೆ-ಗೊಂದಲ ಮಹತ್ವದ ರಾಜಕೀಯ ವಿದ್ಯಮಾನಗಳಿಗೆ ಕಾರಣವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬುಧವಾರ ಸಭೆ ಆಯೋಜಿಸಿದ ಬೆನ್ನಲ್ಲೇ, ಸಚಿವ ಜಾರಕಿಹೊಳಿ ಅವರಿಗೆ ಸೆಡ್ಡು ಹೊಡೆದಿರುವ ಮೇಯರ್ ಶೋಭಾ ಸೋಮನಾಚೆ, ಪಾಲಿಕೆಯಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಸಮಯ ಕೋರಿ ರಾಜ್ಯಪಾಲರಿಗೆ ಪತ್ರ ಬರೆದಿರುವುದು ಕುತೂಹಲ ಕೆರಳಿಸಿದೆ.
ಶಾಸಕ ಅಭಯ ಪಾಟೀಲ ದಲಿತ ಅಧಿಕಾರಿಗಳ ವಿರೋಧಿ ಅನುಸರಿಸುತ್ತಿರುವುದು, ತೆರಿಗೆ ಹೆಚ್ಚಳ ಮಾಡುವ ಮೇಯರ್ ಸಹಿ ಹಾಕಿರುವ ಕಡತ ಕಾಣೆಯಾದ ಬಗ್ಗೆ ಚರ್ಚೆ ನಡೆಸಲು ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಕಚೇರಿಯಲ್ಲಿ ಸಭೆ ನಡೆದಿದೆ.
ಈ ಬೆಳವಣಿಗೆ ಮಧ್ಯೆಯೇ ಮೇಯರ್ ಶೋಭಾ ಸೋಮನಾಚೆ, ಪಾಲಿಕೆಯ ಆಯುಕ್ತರು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರ, ಯುಪಿಎಸ್ಸಿ, ಡಿಪಿಎಆರ್, ಡಿಓಪಿಟಿಗೆ ಶಿಫಾರಸು ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ವಿನಾಕಾರಣ ಪಾಲಿಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.