ಕೇರಳದಲ್ಲಿ ಕಾರಿಗೆ ಬೆಂಕಿ ತಗುಲಿ ದಂಪತಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇರಳದಲ್ಲಿ ಪತ್ತನಂತಿಟ್ಟ ಜಿಲ್ಲೆಯ ತಿರುವಲ್ಲಾದ ವೆಂಗಲ್‌ನಲ್ಲಿ ಕಾರಿಗೆ ಬೆಂಕಿ ತಗುಲಿ ಕಾರಿನಲ್ಲಿದ್ದ ವೃದ್ಧ ದಂಪತಿಗಳು ಸುಟ್ಟು ಕರಕಲಾಗಿದ್ದಾರೆ.

ಶುಕ್ರವಾರ ಈ ಘಟನೆ ನಡೆದಿದ್ದು, ಕಾರಿಗೆ ಬೆಂಕಿ ಹೇಗೆ ತಗುಲಿತು ಎಂಬುದು ನಿಗೂಢವಾಗಿದೆ. ಮೃತರನ್ನು ತಿರುವಲ್ಲಾದ ತುಕಲಶ್ಶೇರಿ ನಿವಾಸಿಗಳಾದ ರಾಜು ಥಾಮಸ್ (69 ವರ್ಷ) ಮತ್ತು ಅವರ ಪತ್ನಿ ಲೈಜಿ ಥಾಮಸ್ (63 ವರ್ಷ) ಎಂದು ಗುರುತಿಸಲಾಗಿದೆ.

ತುಕಲಶ್ಶೇರಿಯ ಕೌನ್ಸಿಲರ್ ರೀನಾ ವಿಶಾಲ್ ಅವರು ಈ ದುರ್ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸಂತ್ರಸ್ಥ ದಂಪತಿಗಳು ಅರವತ್ತರ ಆಸುಪಾಸಿನವರಾಗಿದ್ದಾರೆ. ಕಾರಿನಲ್ಲಿದ್ದ ದಂಪತಿಯ ಏಕೈಕ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧ ದಂಪತಿಗಳ ಮೃತದೇಹದ ಅವಶೇಷಗಳು ಸಂಪೂರ್ಣವಾಗಿ ಸುಟ್ಟು ವಿರೂಪಗೊಂಡಿದ್ದರಿಂದ ಪೊಲೀಸರು ಅವರನ್ನು ಗುರುತಿಸಲು ಕಷ್ಟಪಡುತ್ತಿದ್ದರು. ಆದರೆ ಮೃತ ಮಹಿಳೆ ಧರಿಸಿದ್ದ ಆಭರಣಗಳ ಆಕೆಯನ್ನು ಗುರುತಿಸಲಾಯಿತು ಎಂದು ತಿಳಿಸಿದ್ದಾರೆ.

ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಂದ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯನಡೆಸಿದರು.

ಮೊದಲಿಗೆ ಈ ಪ್ರದೇಶದಲ್ಲಿದ್ದ ಕಸದ ರಾಶಿಗೆ ಬೆಂಕಿ ಹೊತ್ತಿದೆ ಏನೋ ಎಂದು ಸ್ಥಳೀಯರು ತಿಳಿದಿದ್ದರು. ಆದರೆ ಬಳಿಕ ಅದು ಕಸದ ರಾಶಿಯಲ್ಲ..ಬದಲಿಗೆ ಕಾರು ಎಂದು ಮನಗಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕಾಗಿಮಿಸಿದ ಪೊಲೀಸರು ಕಾರಿನಲ್ಲಿ ಮನುಷ್ಯರು ಇರುವುದನ್ನು ಮನಗಂಡು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಕಾರಿನ ಮುಂಭಾಗದಲ್ಲಿದ್ದ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಹಿಂಭಾಗದಲ್ಲಿದ್ದ ವೃದ್ಧ ದಂಪತಿಗಳನ್ನು ರಕ್ಷಿಸುವ ಹೊತ್ತಿಗೇ ಅವರು ಸುಟ್ಟು ಕರಕಲಾಗಿದ್ದಾರೆ.

ಅಗ್ನಿ ದುರಂತ ನಡೆದ ತಿರುವಲ್ಲಾದ ವೆಂಗಲ್‌ನ ಈ ರಸ್ತೆಯನ್ನು ಸಾಮಾನ್ಯವಾಗಿ ಪ್ರಯಾಣಿಕರು ಬಳಸುವುದಿಲ್ಲ. ಇಲ್ಲಿನ ಪ್ರಕೃತಿ ವೀಕ್ಷಣೆಗೆ ಮಾತ್ರ ವಿರಳವಾಗಿ ಜನ ಈ ರಸ್ತೆ ಮಾರ್ಗವಾಗಿ ಭೇಟಿ ನೀಡುತ್ತಾರೆ. ದುರಂತ ನಡೆದ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಜನರ ಸಂಖ್ಯೆ ಕೂಡ ವಿರಳವಾಗಿತ್ತು ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಇದು ಅಪಘಾತವೋ ಅಥವಾ ಇನ್ನಾವುದೇ ಅಂಶವೋ ಎಂಬುದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬೆಂಕಿ ಅನಾಹುತಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!