ಹೊಸದಿಗಂತ ವರದಿ, ಹಾವೇರಿ:
ಭಾರತವು ಸೌಹಾರ್ದ ಹಾಗೂ ಸದ್ಭಾವದ ದೇಶವೆಂದು ಜಗತ್ತು ಕೊಂಡಾಡುತ್ತದೆ. ಭಾವೈಕ್ಯತೆಯೇ ನಮ್ಮ ಭಾರತದ ಅಂತಃಸತ್ವವಾಗಿದೆ. ಈ ಭಾವೈಕ್ಯತೆ, ಸಾಮರಸ್ಯ ಇನ್ನಷ್ಟು ಗಟ್ಟಿಗೊಳ್ಳುವ ಅಗತ್ಯವಿದೆ ಎಂದು ಹೊಸಮಠದ ಬಸವ ಶಾಂತಲಿಂಗ ಶ್ರೀಗಳು ಹೇಳಿದರು.
ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಂಗಳವಾರ ಸೌಹಾರ್ದ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನಡೆದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾಮರಸ್ಯ ಪರಂಪರೆಯು ಚಿರಸ್ಥಾಯಿಯಾಗಿ ಉಳಿಯಬೇಕು. ಹಲವಾರು ನಿಂದನೆ, ಅವಮಾನ ಎದುರಿಸಿದರೂ ಅನಿಷ್ಠ ಅಷ್ಪೃಶ್ಯತೆಯನ್ನು ತೊಲಗಿಸಲು ದಿಟ್ಟ ಹೆಜ್ಜೆ ಇಟ್ಟ ಗಾಂಧೀಜಿಯವರು ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡಿದರು ಎಂದು ಸ್ಮರಿಸಿದರು.
ಹಲವು ಅವಯವಗಳನ್ನು ಹೊಂದಿರುವ ನಮ್ಮ ದೇಹದಂತೆ ದೇಶವು ಕೂಡ ಐಕ್ಯತೆ, ಸೌಹಾರ್ದತೆಯಿಂದ ಕೂಡಿ ಬಾಳಬೇಕು. ಮೇಲು ಕೀಳು, ಜಾತಿ ಭೇಧ ತಾರತಮ್ಯವಿಲ್ಲದೇ ಜಾತ್ಯಾತೀತ ತತ್ವದಡಿಯಲ್ಲಿ ಪ್ರೀತಿಯಿಂದ ಈ ದೇಶವನ್ನು ಕಟ್ಟಿರುವುದನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದರು.
ಹಿರಿಯ ಹೋರಾಟಗಾರ ಬಸವರಾಜ ಹಾದಿಮನಿ, ಗೌರಿಮಠದ ಗುರುಪಾದಯ್ಯ ದೇವರು, ಸೆಂಟ್ ಅ್ಯನ್ ಚರ್ಚ್ ಪಾದ್ರಿ ಜೋಸೆಫ್ ಆಲಯ, ಮೌಲ್ವಿ ದಾದಾಪೀರ್ ಮುಲ್ಲಾ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಹಸೀನಾ ಹೆಡಿಯಾಲ, ಪರಿಮಳ ಜೈನ್ ಇದ್ದರು.