`ಏಕ್ ಹೈ ತೊ ಸೇಫ್ ಹೈ’ ಎಂದ ಪ್ರಧಾನಿ ಮಾತಿಗೆ ಟೀಕೆ: ಮೋದಿ, ಅದಾನಿ ಫೋಟೋ ತೋರಿಸಿದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ `ಏಕ್ ಹೈ ತೊ ಸೇಫ್ ಹೈ’ ಎಂಬ ಘೋಷಣೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಅದಾನಿ ಮತ್ತು ನರೇಂದ್ರ ಮೋದಿ ಅವರು ಜೊತೆಗಿರುವ ಫೋಟೋ ತೆರೆದು ತೋರಿಸಿದ ರಾಹುಲ್ ಗಾಂಧಿ ಇದು ಮೋದಿ ಅವರ ಘೋಷಣೆಯ ಅರ್ಥ ಎಂದು ಹೇಳಿದರು.

ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು (ನ.18) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಲಾಕರ್‌ನಿಂದ ಮೋದಿ, ಅದಾನಿ ಫೋಟೋ ಮತ್ತು ಅದಾನಿ ಗ್ರೂಪ್‌ನ ವಿವಾದಾತ್ಮಕ ಧಾರಾವಿ ಪುನರಾಭಿವೃದ್ಧಿ ಯೋಜನೆಯ ನಕ್ಷೆಯನ್ನು ಪ್ರದರ್ಶಿಸಿದರು. ನರೇಂದ್ರ ಮೋದಿ ಸರ್ಕಾರ ಅದಾನಿ ಪರವಾಗಿ ಕೆಲಸ ಮಾಡುತ್ತಿದೆ. ಅವರಿಗಾಗಿ ಯಾವುದೇ ಸಹಾಯ ಮಾಡಲು ಸಿದ್ಧವಾಗಿದೆ. ಹೀಗಾಗಿ ವಿಮಾನ ನಿಲ್ದಾಣ, ಬಂದರು ಸೇರಿದಂತೆ ಎಲ್ಲ ಪ್ರಮುಖ ಪ್ರಾಜೆಕ್ಟ್‌ಗಳ ಟೆಂಡರ್ ಅವರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಧಾರಾವಿ ಯೋಜನೆಯ ಟೆಂಡರ್ ಅನ್ನು ರದ್ದುಗೊಳಿಸುವ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರ ಭರವಸೆಯನ್ನು ಬೆಂಬಲಿಸಿ, ಇದಕ್ಕೆ ನನ್ನ ಸಹಮತವಿದೆ ಎಂದರು.

ಪ್ರಮುಖ ಕೈಗಾರಿಕಾ ಯೋಜನೆಗಳನ್ನು ಮಹಾರಾಷ್ಟ್ರದಿಂದ ಗುಜರಾತ್‌ಗೆ ಸ್ಥಳಾಂತರಿಸಲಾಗಿದೆ . ಏಕನಾಥ್ ಶಿಂಧೆ ಸರ್ಕಾರವು ರಾಜ್ಯದ ಆರ್ಥಿಕ ಅವಕಾಶಗಳನ್ನು ಕಸಿದು ಗುಜುರಾತ್‌ಗೆ ನೀಡಿದೆ. ಫಾಕ್ಸ್ಕಾನ್ ಮತ್ತು ಏರ್‌ಬಸ್‌ನಂತಹ ಒಟ್ಟು 7 ಲಕ್ಷ ಕೋಟಿ ರೂ. ಯೋಜನೆಗಳನ್ನು ಗುಜರಾತ್‌ಗೆ ಸ್ಥಳಾಂತರಿಸಲಾಗಿದೆ. ಮಹರಾಷ್ಟ್ರದ ಯುವಕರ 5 ಲಕ್ಷ ಉದ್ಯೋಗಗಳನ್ನು ಕಸಿದುಕೊಳ್ಳಲಾಗಿದೆ. ಈ ಚುನಾವಣೆಯು ಕೆಲವು ಬಿಲಿಯನೇರ್‌ಗಳು ಮತ್ತು ಬಡವರ ನಡುವಿನ ಸಿದ್ಧಾಂತಗಳ ಯುದ್ಧವಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಮಹಾರಾಷ್ಟ್ರದ ನಾಗರಿಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತದೆ ಎಂದು ಪ್ರತಿಜ್ಞೆ ಮಾಡಿದರು.

ಮಧ್ಯ ಮುಂಬೈನಲ್ಲಿ 600 ಎಕರೆ ಪ್ರಧಾನ ಭೂಮಿಯನ್ನು ಒಳಗೊಂಡಿರುವ ಧಾರಾವಿ ಪುನರಾಭಿವೃದ್ಧಿ ಯೋಜನೆಯು ಚುನಾವಣಾ ವಿಷಯವಾಗಿದೆ. ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದ ಅಡಿಯಲ್ಲಿ 2022ರಲ್ಲಿ ಅದಾನಿ ಗ್ರೂಪ್ ಪುನರಾಭಿವೃದ್ಧಿ ಬಿಡ್ ಅನ್ನು ಗೆದ್ದುಕೊಂಡಿತು. ಆದರೆ ವಿರೋಧ ಪಕ್ಷಗಳು ಗುತ್ತಿಗೆ ನೀಡುವಲ್ಲಿ ಪಾರದರ್ಶಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಬಿಜೆಪಿ ಈ ಹಿಂದೆ ಧಾರಾವಿ ಯೋಜನೆಯನ್ನು ಸಮರ್ಥಿಸಿಕೊಂಡಿದೆ. ಇದು ಕೊಳಚೆ ಪ್ರದೇಶದ ನಿವಾಸಿಗಳಿಗೆ ಉತ್ತಮ ಜೀವನ ಪರಿಸ್ಥಿತಿಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಲು ಪರಿವರ್ತಕ ಉಪಕ್ರಮ ಎಂದು ಕರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!