ಹೊಸದಿಗಂತ ವರದಿ,ಚಿಕ್ಕಮಗಳೂರು:
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ಶಾಸಕರೂ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳೂ ಆದ ಸಿ.ಟಿ.ರವಿ ಅವರು ೧ ಲಕ್ಷ ರೂ.ನೆರವು ಘೋಷಿಸಿದ್ದು, ಈ ಸಂಬಂಧ ಚೆಕ್ಕನ್ನು ಶಾಸಕರ ಪತ್ನಿ ಪಲ್ಲವಿ ಸಿ.ಟಿ.ರವಿ ಅವರು ಸಂಘಟನೆ ಮುಖಂಡರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಪಲ್ಲವಿ, ಹರ್ಷನ ಹತ್ಯೆ ಖಂಡನೀಯ, ಇದು ಅವರ ಕುಟುಂಬ ಹಾಗೂ ಹಿಂದೂ ಸಂಘಟನೆಗೆ ತುಂಬಲಾರದ ನಷ್ಟ. ಯಾರೇ ವ್ಯಕ್ತಿಗಳಾದರೂ ಅವರ ಕುಟುಂಬಕ್ಕೆ ಎಷ್ಟೇ ಹಣ ನೀಡಿದರು, ಅವರ ಮಗನನ್ನು ಪುನಃ ಕರೆತರಲು ಸಾಧ್ಯವಿಲ್ಲ, ಬದಲಾಗಿ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು ಧೈರ್ಯ ತುಂಬಬೇಕಿದೆ ಎಂದರು.
ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಬಜರಂಗದಳ ಇನ್ನಿತರೆ ಹಿಂದೂ ಸಂಘಟನೆ ಕಾರ್ಯಕರ್ತರು ಒಂದಾಗಿ ಹಲವರಿಂದ ಹಣ ಸಂಗ್ರಹಿಸಿ ಕುಟುಂಬಕ್ಕೆ ಹರ್ಷನ ಕುಟುಂಬಕ್ಕೆ ನೆರವಾಗುತ್ತಿದ್ದಾರೆ. ಇದೀಗ ನಮ್ಮ ಕಡೆಯಿಂದ ಅವರ ಕುಟುಂಬಕ್ಕೆ ೧ ಲಕ್ಷ ನೆರವನ್ನು ನೀಡಿ ಸಾಂತ್ವನ ಹೇಳಲಾಗಿದೆ ಎಂದರು.
ಯಾರೊಬ್ಬರು ಒತ್ತಾಯ ಪೂರ್ವಕವಾಗಿ ಸಂಘಟನೆಗೆ ಸೇರ್ಪಡೆಗೊಂಡಿಲ್ಲ, ಬದಲಾಗಿ ತಮ್ಮಲ್ಲಿನ ದೇಶಾಭಿಮಾನ, ಹಿಂದುತ್ವದ ದೇಶಪ್ರೇಮದಿಂದ ಸ್ವಯಂಪ್ರೇರಿತವಾಗಿ ಸಂಘಟನೆ ಸೇರಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಭಾರತದಲ್ಲಿ ಹುಟ್ಟಿ ಬೆಳೆದು ಇಲ್ಲಿನ ನೀರು ಕುಡಿದು, ಗಾಳಿ ಸೇವಿಸಿ ಎಲ್ಲಾ ಸೌಲಭ್ಯಗಳನ್ನು ಅನುಭವಿಸುವವರು ಹಿಂದುತ್ವ ಎಂಬುದನ್ನು ಅಭಿಮಾನವಾಗಿ ಇರಿಸಿಕೊಂಡಿದ್ದಾರೆ ಎಂದರು. ಹರ್ಷನ ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.