ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಹಿನ್ನೆಲೆ ಗಾಯಕಿ ಕೆ ಎಸ್ ಚಿತ್ರಾ (K S Chithra)ಅವರು ಅಯೋಧ್ಯೆಯಲ್ಲಿ (Ayodhya) ರಾಮಮಂದಿರದ (Ram mandir) ಉದ್ಘಾಟನಾ ಸಮಾರಂಭಕ್ಕೆ ಬೆಂಬಲಿಸುವಂತೆ ಕರೆ ನೀಡಿದ್ದು, ಇದರ ವಿರುದ್ಧ ಎಡಪಂಥೀಯರು ಅಪಸ್ವರ ಎತ್ತಿದ್ದಾರೆ.
ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಭಕ್ತರು ರಾಮ ಮಂತ್ರವನ್ನು ಪಠಿಸುವುದು ಮಾತ್ರವಲ್ಲ, ತಮ್ಮ ತಮ್ಮ ಮನೆಗಳಲ್ಲಿ ಐದು ದೀಪಗಳನ್ನು ಬೆಳಗಿಸಿ ಇದನ್ನು ಸಂಭ್ರಮಿಸಬೇಕು ಎಂದು ಮನವಿ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದೇ ತಡ ಆಕ್ರೋಶ ವ್ಯಕ್ತವಾಗಿದೆ. ‘ಅಲ್ಲಿರುವ ಮಸೀದಿಯನ್ನು ಕೆಡವಿ ದೇವಸ್ಥಾನ ಕಟ್ಟಿದ್ದಾರೆ ಎನ್ನುವುದನ್ನು ಕೆಎಸ್ ಚಿತ್ರಾ ಅರ್ಥ ಮಾಡಿಕೊಳ್ಳಬೇಕು’ ಎಂದು ಅವರಿಗೆ ತಿಳಿಸಿದ್ದಾರೆ.
ತಮ್ಮ ವಿಡಿಯೋಗೆ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲಿಯೇ ಚಿತ್ರಾ ಅವರು ತಮ್ಮ ಸೋಶಿಯಲ್ ಮೀಡಿಯಾ ಪೇಜ್ನಿಂದ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.
ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮವನ್ನು ದೇಶದ ಜನರು ಆಚರಿಸಬೇಕು ಎಂದು ಸೋಮವಾರ ತಮ್ಮ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇದಕ್ಕೂ ಮುನ್ನ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಅವರು ಅಯೋಧ್ಯೆಯ ಶ್ರೀರಾಮ ಮಂದಿರದ ಮಂತ್ರಾಕ್ಷತೆ ಪಡೆದಿದ್ದನ್ನು ತಿಳಿಸಿದ್ದರು. ಕೆಎಸ್ ಚಿತ್ರಾ ವಿರುದ್ಧ ಲೆಫ್ಟಿಸ್ಟ್ ಹಾಗೂ ಕಮ್ಯುನಿಸ್ಟ್ ಬ್ರಿಗೇಡ್ ದಾಳಿ ಮಾಡಿದ ಬೆನ್ನಲ್ಲಿಯೇ 45 ವರ್ಷ ಸಂಗೀತ ಕ್ಷೇತ್ರದಲ್ಲೇ ಕಳೆದಿರುವ ದಿಗ್ಗಜ ಗಾಯಕಿಗೆ ಸಾಕಷ್ಟು ಮಂದಿ ಬೆಂಬಲವಾಗಿ ನಿಂತಿದ್ದಾರೆ.
ವಿಡಿಯೊದಲ್ಲೇನಿದೆ?
“ಎಲ್ಲರಿಗೂ ನಮಸ್ಕಾರ. ಜನವರಿ 22 ರಂದು ಮಧ್ಯಾಹ್ನ 12:20 ಕ್ಕೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದಾಗ, ಪ್ರತಿಯೊಬ್ಬರೂ ‘ಶ್ರೀರಾಮ, ಜಯ ರಾಮ, ಜಯ ಜಯ ರಾಮ’ ಎಂಬ ಮಂತ್ರವನ್ನು ಪಠಿಸಬೇಕು. ಹಾಗೆಯೇ ಸಂಜೆಯ ವೇಳೆ ಮನೆಯ ಎಲ್ಲಾ ಭಾಗಗಳಲ್ಲಿ ಐದು ಬತ್ತಿಯ ದೀಪಗಳನ್ನು ಹಚ್ಚಬೇಕು. ದೇವರ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಲೋಕಾ ಸಮಸ್ತಾ ಸುಖಿನೋ ಭವಂತು.” ಎಂದು ಚಿತ್ರಾ ಹೇಳಿದ್ದಾರೆ.
ಬಿಜೆಪಿ ಕೇರಳ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಚಿತ್ರಾ ಅವರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ರೀತಿ ಬರೆದಿದ್ದಾರೆ. “ಅಯೋಧ್ಯೆ ಪ್ರಾಣ ಪ್ರತಿಷ್ಠಾ ದಿನದಂದು ದೀಪ ಬೆಳಗಿಸುವಂತೆ ಮನವಿ ಮಾಡಿದ ಗಾಯಕಿ ಚಿತ್ರಾ ಅವರ ಮೇಲಿ ಎಡ-ಜಿಹಾದಿ ಗುಂಪುಗಳು ಸೈಬರ್ ದಾಳಿ ನಡೆಸಿವ. ಕೇರಳದಲ್ಲಿ ಪಿಣರಾಯಿ ವಿಜಯನ್ ಆಳ್ವಿಕೆಯಲ್ಲಿ ಒಬ್ಬ ಹಿಂದೂ ತನ್ನ ನಂಬಿಕೆಗಳನ್ನು ಸಹ ಅನುಯಾಯಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಈ ಕೃತ್ಯದ ಬಗ್ಗೆ ಕಾಂಗ್ರೆಸ್ ಮೌನವಾಗಿರುವುದು ನಾಚಿಕೆಗೇಡಿನ ಸಂಗತಿ. ನಾವು ಕೇರಳ ಬಿಜೆಪಿ ಕೆಎಸ್ ಚಿತ್ರಾ ಅವರ ಅಚಲ ಬೆಂಬಲಕ್ಕೆ ನಿಂತಿದ್ದೇವೆ.
ಇನ್ನು ಚಿತ್ರಾ ಅವರ ಬೆಂಬಲಕ್ಕೆ ನಿಂತಿರುವ ಗಾಯಕ ಜಿ ವೇಣುಗೋಪಾಲ್, ಚಿತ್ರಾ ಇದುವರೆಗೆ ಯಾವುದೇ ವಿವಾದಗಳಲ್ಲಿ ಭಾಗಿಯಾಗಿಲ್ಲ. ಅವರನ್ನು ಅವಮಾನಿಸುವ ಮತ್ತು ಬೇರೆ ಎಂದು ನೋಡುವ ಸಾಮಾಜಿಕ ಜಾಲತಾಣಗಳ ಪೋಸ್ಟ್ಗಳ ಬಗ್ಗೆ ನನಗೆ ಬೇಸರವಿದೆ ಎಂದು ವೇಣುಗೋಪಾಲ್ ಬರೆದಿದ್ದಾರೆ.