ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಕೇಸಲ್ಲಿ ಪೊಲೀಸರ ತನಿಖೆ ತೀವ್ರವಾಗಿದೆ. ಪರಿಚಯಸ್ಥ ಪೊಲೀಸ್ ಅಧಿಕಾರಿಗಳನ್ನು ಕಾಣುತ್ತಿದ್ದಂತೆ, ದರ್ಶನ್ ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದು ಅಲವತ್ತುಕೊಂಡಿದ್ದಾರೆ.
ಸಾರ್ ನಾನು ತಪ್ಪು ಮಾಡಿಬಿಟ್ಟೆ. ಮುಂಗೋಪದಿಂದ ತಪ್ಪು ಮಾಡಿಬಿಟ್ಟೆ. ಅನಗತ್ಯವಾಗಿ ನಾನು ಕೇಸಲ್ಲಿ ಸಿಕ್ಕಿಬಿಟ್ಟೆ. ಸ್ನೇಹಿತರನ್ನು ನಂಬಿ ನಾನು ಹಾಳಾದೆ. ನನ್ನ ಜೀವನದಲ್ಲಿ ಇದೊಂದು ಕಪ್ಪುಚುಕ್ಕಿ ಎಂದು ಪೊಲೀಸರ ಬಳಿ ದರ್ಶನ್ ಪಶ್ಚಾತ್ತಾಪಪಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ.
ವಿಚಾರಣೆ ವೇಳೆ ‘ಸರ್ ನನ್ನನ್ನ ಬಿಟ್ಟು ಬಿಡಿ’ ಎಂದು ದರ್ಶನ್ ಅಂಗಲಾಚಿ ಬೇಡಿಕೊಂಡರಂತೆ. ಜೊತೆಗೆ, ಪೊಲೀಸರ ಕಾಲಿಗೂ ಬೀಳಲು ದರ್ಶನ್ ಹೋಗಿದ್ದಾರೆ ಎನ್ನಲಾಗಿದೆ.
ಇತ್ತ ಪೊಲೀಸರ ವಿಚಾರಣೆ ವೇಳೆ ಎ-1 ಆರೋಪಿ ಪವಿತ್ರಾಗೌಡ ಬಾಯಿ ಬಿಡುತ್ತಿಲ್ಲ. ಇದು ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಏನೇ ಕೇಳಿದ್ರೂ ಪವಿತ್ರಾ ಗೌಡ ನನಗೇನೂ ಗೊತ್ತಿಲ್ಲ. ನಿಮಗೆ ಏನ್ ಬೇಕೋ ಹಾಗೆ ಬರೆದುಕೊಳ್ಳಿ ಅಂತ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ಪವಿತ್ರಾ ಗೌಡ ಹೇಳಿಕೆ ದಾಖಲಿಸಿಕೊಳ್ಳಲು ವಿಳಂಬವಾಗಿದೆ.
ಸ್ಪಾಟ್ ಮಹಜರು ವೇಳೆ, ಕೊಲೆ ನಡೆದ ದಿನದಂದು ದರ್ಶನ್ ಹಾಗೂ ಪವಿತ್ರಾ ಗೌಡ ಧರಿಸಿದ್ದ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಟ್ಟೆಗಳನ್ನು ಡ್ರೈ ಕ್ಲಿನಿಂಗ್ಗೆ ಕೊಟ್ಟಿದ್ದರು ಕೂಡ ರಕ್ತದ ಕಲೆಗಳು ಪತ್ತೆಯಾಗಿವೆ.
ಇನ್ನೂ ಬೆಂಗಳೂರಿನಲ್ಲಿ ತನಿಖೆ ಮುಗಿಸಿರೋ ಪೊಲೀಸರು ಮಂಗಳವಾರ ಮೈಸೂರಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ. ದರ್ಶನ್ ಉಳಿದುಕೊಂಡಿದ್ದ ಹೊಟೇಲ್, ಅರೆಸ್ಟ್ ಆಗೋ ಮುನ್ನ ದರ್ಶನ್ ಹೋಗಿದ್ದ ಜಿಮ್ ಮಹಜರು ನಡೆಸಲಿದ್ದಾರೆ. ಹತ್ಯೆ ಬಳಿಕ ಮೈಸೂರಿಗೆ ಹೋಗಲು ಬಳಸಿದ್ದ ಐಷಾರಾಮಿ ಕಾರನ್ನೂ ಪೊಲೀಸರು ವಶಕ್ಕೆ ಪಡೆಯೋ ಸಾಧ್ಯತೆಗಳಿವೆ.