ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರಿನಲ್ಲಿ 25ನೇ ವರ್ಷದ ದತ್ತ ಜಯಂತಿ ಆಚರಣೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಡಿ.6 ರಿಂದ 14 ರವರೆಗೆ ನಡೆಯುವ ಈ ಜಯಂತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸುಗಮ ಆಚರಣೆಗೆ ಸುಮಾರು 4000 ಪೊಲೀಸರನ್ನು ನಿಯೋಜಿಸಲಾಗಿದ್ದು, ಪ್ರಮುಖ ಪ್ರದೇಶಗಳಲ್ಲಿ ಚೆಕ್ ಪೋಸ್ಟ್ಗಳು ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಚಂದ್ರದ್ರೋಣ ಪರ್ವತದ ಸಾಲಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದು ಪೀಠಕ್ಕಾಗಿ ಆಗ್ರಹಿಸಿ ವಿಹೆಚ್ಪಿ, ಭಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ 25ನೇ ವರ್ಷದ ದತ್ತಜಯಂತಿಗೆ ಚಿಕ್ಕಮಗಳೂರು ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ. ಡಿಸೆಂಬರ್ 6 ರಂದು ದತ್ತಮಾಲಾ ಧಾರಣೆ ಮೂಲಕ ಆರಂಭವಾಗಿರುವ ದತ್ತಜಯಂತಿ 14ರವರೆಗೂ ನಡೆಯಲಿದೆ. ಪ್ರಮುಖ ಕಾರ್ಯಕ್ರಮಗಳು 12 ರಿಂದ 14 ರ ವರೆಗೂ ನಡೆಯಲಿದ್ದು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದೆ.
7 ಎಸ್ಪಿಗಳ ನೇತೃತ್ವದಲ್ಲಿ 4000 ಪೊಲೀಸರ ನಿಯೋಜನೆ ಮಾಡಲಾಗಿದೆ. 27 ಮಂದಿ ಡಿವೈಎಸ್ಪಿ, 45 ಮಂದಿ ಇನ್ಸ್ಸ್ಪೆಕ್ಟರ್, 300 ಪೊಲೀಸ್ ಸಬ್ ಇನ್ಸ್ಸ್ಪೆಕ್ಟರ್, 500 ಮಂದಿ ಗೃಹ ರಕ್ಷಕದಳ ಸಿಬ್ಬಂದಿ, 20 ಕೆಎಸ್ಆರ್ಪಿ, 28 ಡಿಎಆರ್ ನಿಯೋಜನೆ ಮಾಡಲಾಗಿದೆ.
ಇದರ ಜತೆಗೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶದಲ್ಲಿರುವ ಸ್ಥಳೀಯರಲ್ಲಿ ಆತ್ಮಸ್ಥೈರ್ಯ ತುಂಬಲು ರೂಟ್ ಮಾರ್ಚ್ ನಡೆಸಲು ಆರ್ಐಎಫ್ ತುಕಡಿಯನ್ನು ನಿಯೋಜಿಸಲಾಗಿದೆ. ಇನ್ನೂ 61 ವಿಶೇಷ ಅಧಿಕಾರಿಗಳ ನೇಮಕ ಮಾಡಿದ್ದು, ಜಿಲ್ಲೆಯ ಗಡಿ ಭಾಗ ಸೇರಿದಂತೆ ಚಿಕ್ಕಮಗಳೂರು ನಗರದಲ್ಲಿ 36 ಚೆಕ್ ಪೋಸ್ಟ್, 400 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಚಿಕ್ಕಮಗಳೂರು ಮೂಡಿಗೆರೆ, ಶೃಂಗೇರಿ ಕೊಪ್ಪ, ಎಚ್ಆರ್ ಪುರ, ಕಡೂರು, ತರೀಕೆರೆ ತಾಲೂಕಿನಲ್ಲಿ 13 ರಿಂದ 14ರ ವರೆಗೂ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಡಿ.11 ರಿಂದ 15 ರ ಬೆಳಗ್ಗೆ 10 ಗಂಟೆಯ ವರೆಗೂ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿದಂತೆ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಾಧಾರ ಸೇರಿದಂತೆ ಚಂದ್ರದ್ರೋಣ ಪರ್ವತದ ಸಾಲಿನ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ.
ಡಿ.12 ರಂದು ಚಿಕ್ಕಮಗಳೂರು ನಗರದಲ್ಲಿ ಮೂರು ಸಾವಿರಕ್ಕೂ ಅಧಿಕ ಮಹಿಳೆಯರು ಸಂಕೀರ್ತನ ಯಾತ್ರೆ ಮೂಲಕ ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳಿ ದತ್ತ ಪಾದುಕೆ ದರುಶನ ಪಡೆದರೆ, ಡಿ.13 ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಈ ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗಿಯಾಗಲಿದ್ದು, ದತ್ತಜಯಂತಿಯ ಕೊನೆಯ ದಿನ ಅಂದರೆ ಡಿ. 14ರಂದು ಹಿಂದೂ ಸಂಘಟನೆಯ ಮುಖಂಡರು, ಬಿಜೆಪಿ ನಾಯಕರು, ಮಠಾಧೀಶರು ಸೇರಿದಂತೆ 40 ಸಾವಿರಕ್ಕೂ ಅಧಿಕ ದತ್ತ ಭಕ್ತರು ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳಿ, ದತ್ತ ಪಾದುಕೆ ದರ್ಶನ ಪಡದು ವಿವಾದ ಗುಹೆಯ ಮುಂಭಾಗದಲ್ಲಿರುವ ತುಳಸಿ ಕಟ್ಟೆಯ ಬಳಿ ಹೋಮ ಪೂಜೆ ನಡೆಸಲಿದ್ದಾರೆ.