ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ದುಂಬ್ರಿಗುಡ ಮಂಡಲದ ಪೆದಪಾಡು ಗ್ರಾಮದ ಪ್ರತಿ ನಿವಾಸಿಗಳಿಗೆ ಚಪ್ಪಲಿಗಳನ್ನು ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಇತ್ತೀಚೆಗೆ ಪವನ್ ಕಲ್ಯಾಣ್, ಅರಕು ಮತ್ತು ದುಂಬ್ರಿಗುಡ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಪೆದಪಡು ಗ್ರಾಮಕ್ಕೆ ಭೇಟಿ ನೀಡಿದ್ದ ಕ್ಷಣ ಹಿರಿಯ ಮಹಿಳೆಯರು ಬರಿಗಾಲಲ್ಲಿ ಇರುವುದನ್ನೂ ಗಮನಿಸಿದ್ದಾರೆ. ಇದರಿಂದ ಬೇಸರಗೊಂಡ ಅವರು, ಗ್ರಾಮದಲ್ಲಿ ಎಷ್ಟು ನಿವಾಸಿಗಳಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಬಳಿಕ, ಗ್ರಾಮದ ಪ್ರತಿ ನಿವಾಸಿಗಳಿಗೂ ಚಪ್ಪಲಿ ಒದಗಿಸುವಂತೆ ಸೂಚಿಸಿದ್ದಾರೆ.
ಪವನ್ ಕಲ್ಯಾಣ್ ಅವರ ಈ ಕ್ರಮಕ್ಕೆ ಗ್ರಾಮಸ್ಥರು ಸಂತೋಷ ಮತ್ತು ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಸಂಕಷ್ಟವನ್ನು ಗುರುತಿಸಿ, ಸ್ಪಂದಿಸಿರುವುದು ಸಂತಸ ಮೂಡಿಸಿದೆ ಎಂದು ಕೆಲವು ಗ್ರಾಮಸ್ಥರು ಗದ್ಗದಿತರಾದರು.
ಈ ಪ್ರವಾಸದ ಸಂದರ್ಭದಲ್ಲಿ ಪವನ್ ಕಲ್ಯಾಣ್ ಮಗ ಸಿಂಗಾಪುರದಲ್ಲಿ ಓದುತ್ತಿದ್ದ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರವಾಸ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರವಾಸ ಕೈಗೊಂಡು, ಅರಕು ಬಳಿಕ ಕುರಿಡಿ ಗ್ರಾಮಕ್ಕೆ ಭೇಟಿ ನೀಡಿ, ಜನರ ಸಮಸ್ಯೆಯನ್ನು ಆಲಿಸುವ ಭರವಸೆ ನೀಡಿದ್ದಾರೆ.