ಉರುಳು ಹಾಕಿ ಜಿಂಕೆ ಹತ್ಯೆ: ಓರ್ವನ ಬಂಧನ

ಹೊಸದಿಗಂತ ವರದಿ,ಕೊಡಗು:
ಉರುಳು ಹಾಕಿ ಜಿಂಕೆಯೊಂದನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಮಡಿಕೇರಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಮಾವಿನಹಳ್ಳ ಹಾಡಿಯ ಕುಮಾರ ಎಂಬಾತನೇ ಬಂಧಿತ‌ ಆರೋಪಿ.
ಆರೋಪಿಯು ಆನೆಕಾಡು ಮೀಸಲು ಅರಣ್ಯದಲ್ಲಿ ಉರುಳು ಹಾಕಿ ಜಿಂಕೆಯನ್ನು ಹತ್ಯೆ ಮಾಡಿ, ಮಾಂಸವನ್ನು ಭಕ್ಷಿಸಿದ್ದನೆನ್ನಲಾಗಿದೆ. ಈ ಬಗ್ಗೆ ದೊರೆತ ಸುಳಿವಿನ ಮೇಲೆ ದಾಳಿ ನಡೆಸಿದ ಪೊಲೀಸರು ಜಿಂಕೆಯ ಚರ್ಮ ಸಹಿತ ಆರೋಪಿ ಕುಮಾರನನ್ನು ಬಂಧಿಸಿದ್ದಾರೆ.
ಈತನೊಂದಿಗೆ ಸಹಕರಿಸಿರುವ ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಈತನ ಬಂಧನಕ್ಕೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಮಹಾನಿರ್ದೇಶಕ ಕೆ.ವಿ.ಶರತ್‍ಚಂದ್ರ ಅವರ ನಿರ್ದೇಶನದಲ್ಲಿ ಮಡಿಕೇರಿಯ ಸಿಐಡಿ ಘಟಕದ ಅಧೀಕ್ಷಕ ಚಂದ್ರಕಾಂತ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಸಂಚಾರಿ ದಳದ ಎಸ್.ಐ.ಸಿ.ಯು ಸವಿ, ಹೆಡ್‍ಕಾನ್ಸ್ಟೇಬಲ್ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್, ಮೋಹನ್, ಸಿಬ್ಬಂದಿಗಳಾದ ಸ್ವಾಮಿ, ಮಂಜುನಾಥ್ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!