ಹೊಸದಿಗಂತ ಡಿಜಿಟಲ್ ಡೆಸ್ಕ್
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿದ ಆರೋಪದಡಿ ಪಂಜಾಬ್ ಪೊಲೀಸರಿಂದ ಬಂಧಿತರಾಗಿದ್ದ ಬಿಜೆಪಿ ಮುಖಂಡ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಅವರ ಬೆನ್ನು ಮತ್ತು ಭುಜದ ಮೇಲೆ ಗಾಯಗಳಾಗಿರುವುದು ವೈದ್ಯಕೀಯ ದಾಖಲೆಗಳಲ್ಲಿ ಬಹಿರಂಗವಾಗಿದೆ.
ಪಂಜಾಬ್ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಗ್ಗಾ ಬಿಡುಗಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಆರೋಪಿಸಿದ್ದರು. ಬಗ್ಗಾಮೇಲಿನ ಹಲ್ಲೆ ಪ್ರಕರಣ ಪಂಜಾಬ್ ಪೊಲೀಸರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಬಿಜೆಪಿ ನಾಯಕರು ಬಗ್ಗಾ ಮೇಲಿನ ಹಲ್ಲೆಗೆ ಸಂಬಂಧಿಸಿ ಪಂಜಾಬ್ ಪೊಲೀಸರ ವಿರುದ್ಧ ಮೂರನೇ ದೂರು ದಾಖಲಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಏನಿದು ಪ್ರಕರಣ?
ತೇಜಿಂದರ್ ಬಗ್ಗಾ ದೆಹಲಿಯಲ್ಲಿ ವಾಸಿಸುವ ಬಿಜೆಪಿ ಮುಖಂಡ. ಮಾರ್ಚ್ 3ರಂದು ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ದೆಹಲಿ ಮುಖ್ಯಮಂತ್ರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಶುಕ್ರವಾರ ಪಂಜಾಬ್ ಪೊಲೀಸರು ಅವರನ್ನು ದೆಹಲಿಗೆ ಬಂದು ಕರೆದೊಯ್ದದದ್ದು ರಾಜಕೀಯ ಪ್ರೇರಿತ ಎಂಬುದು ಯಾರಿಗಾದರೂ ತಿಳಿಯುವಂತಿತ್ತು. ಏಕೆಂದರೆ ದೆಹಲಿ ಮುಖ್ಯಮಂತ್ರಿ ಮೇಲೆ ದೆಹಲಿ ನಿವಾಸಿಯೊಬ್ಬ ಮಾಡಿದ ಟೀಕೆಗೆ ಪಂಜಾಬ್ ಪೊಲಿಸರಿಗೇನು ಕೆಲಸ? ಪಂಜಾಬಿನಲ್ಲಿ ಆಪ್ ಸರ್ಕಾರವಿದೆ ಎಂಬ ಒಂದೇ ಕಾರಣಕ್ಕೆ ಅಲ್ಲಿನ ಪೊಲೀಸ್ ಪಡೆಯನ್ನು ರಾಜಕೀಯವಾಗಿ ಬಳಸಿಕೊಂಡಿರುವುದು ಸ್ಪಷ್ಟವಾಗಿತ್ತು.
ಬಗ್ಗಾ ಅವರನ್ನು ಅಪಹರಿಸಲಾಗಿದೆ ಎಂದು ಬಗ್ಗಾ ಪೋಷಕರು ದ್ವಾರಕಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದ್ವಾರಕಾ ನ್ಯಾಯಾಲಯವು ಅವರನ್ನು ತಕ್ಷಣವೇ ಹಾಜರುಪಡಿಸಲು ಆದೇಶವನ್ನು ನೀಡಿತು. ಈ ಸಂಬಂಧ ಕಾರ್ಯಾಚರಣೆಗೆ ಇಳಿದ ದೆಹಲಿ ಪೊಲೀಸರು ಪಂಜಾಬ್ ಪೊಲೀಸರ ಬೆಂಗಾವಲು ಪಡೆಯನ್ನು ಕುರುಕ್ಷೇತ್ರದಲ್ಲಿ ತಡೆದು, ಬಗ್ಗಾ ಅವರನ್ನು ದೆಹಲಿಗೆ ಮರಳಿ ಕರೆತಂದರು.
ಪಂಜಾಬ್ ಪೊಲೀಸರು ಹಾಗೂ ಬಗ್ಗಾ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮೆಟ್ರೋಪಾಲಿಟಿನ್ ನ್ಯಾಯಾಧೀಶ ತ್ರಿಪಾಠಿ ಅವರು, ಬಗ್ಗಾ ಅವರ ಸುರಕ್ಷತೆ ಮತ್ತು ಭದ್ರತೆಯ ಕುರಿತಾಗಿ ವರದಿ ನೀಡುವಂತೆ ಜನಕಪುರಿ ಪೊಲೀಸರಿಗೆ ಸೂಚಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ