ರಾಷ್ಟ್ರ ರಾಜಧಾನಿಯನ್ನು ನಡುಗಿಸುತ್ತಿರುವ ಡೆಂಗ್ಯೂ: 163 ಪ್ರಕರಣಗಳು ಬೆಳಕಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಮುನಾ ನದಿಯ ಪ್ರವಾಹದ ಜೊತೆಗೆ ಡೆಂಗ್ಯೂ ಜ್ವರ ರಾಷ್ಟ್ರ ರಾಜಧಾನಿ ದೆಹಲಿಯನ್ನು ತತ್ತರಿಸುತ್ತಿದೆ. ದೆಹಲಿಯ ಹಲವೆಡೆ ಪ್ರವಾಹದ ನೀರು ನಿಂತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಇದರಿಂದಾಗಿ ದೆಹಲಿಯಲ್ಲಿ ಈಗಾಗಲೇ 163 ಮಂದಿ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದಾರೆ. ಜುಲೈ 15ರವರೆಗೆ ದೆಹಲಿಯಲ್ಲಿ 163 ಡೆಂಗ್ಯೂ ಜ್ವರ ಪ್ರಕರಣಗಳು ದಾಖಲಾಗಿರುವುದರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ದೆಹಲಿಯಲ್ಲಿ ಡೆಂಗ್ಯೂ ಜ್ವರ ವ್ಯಾಪಕವಾಗಿದೆ. ಇದೀಗ ಯಮುನಾ ನದಿ ಪ್ರವಾಹದಿಂದ ಕಳೆದ ವಾರದಲ್ಲಿ 39 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಸದ್ಯ 10 ಮಂದಿ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡೆಂಗ್ಯೂ ಜ್ವರದ ಜೊತೆಗೆ ದೆಹಲಿಯಲ್ಲಿ 14 ಚಿಕುನ್ ಗುನ್ಯಾ ಮತ್ತು 54 ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಯಮುನಾ ನದಿಯ ಪ್ರವಾಹದ ನೀರು ನಿಂತ ಪ್ರದೇಶಗಳಲ್ಲಿ ಸೊಳ್ಳೆಗಳು ಹರಡದಂತೆ ಕ್ರಮಗಳನ್ನು ಕೈಗೊಳ್ಳುವಂತೆ ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜ್ವರ, ವಾಂತಿ ಭೇದಿಯಿಂದ ರೋಗಿಗಳು ಆಸ್ಪತ್ರೆಗಳಿಗೆ ಬರುತ್ತಿದ್ದು, ಪ್ರವಾಹದಿಂದ ಡೆಂಗ್ಯೂ, ಮಲೇರಿಯಾ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ತೀವ್ರ ಜ್ವರ ಹಾಗೂ ವಾಂತಿಭೇದಿಯಿಂದ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಲೋಕನಾಯಕ ಆಸ್ಪತ್ರೆಯ ವೈದ್ಯರು ಡಾ.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!