ಹೊಸದಿಗಂತ ಡಿಜಿಟಲ್ ಡೆಸ್ಕ್ :
ಶುಕ್ರವಾರ ಮನಾಲಿ-ಚಂಡೀಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಲಾಸ್ಪುರ ಜಿಲ್ಲಾ ಕೇಂದ್ರದ ಬಳಿಯ ಜಬ್ಲಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಕಮಲಾ ನೆಹರು ಕಾಲೇಜಿನ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಕಾಲೇಜು ಪ್ರಾಂಶುಪಾಲರ ಪ್ರಕಾರ, ಕಮಲಾ ನೆಹರೂ ಕಾಲೇಜಿನ ವಿದ್ಯಾರ್ಥಿಗಳು ಮನಾಲಿಗೆ ಪ್ರವಾಸಕ್ಕೆ ತೆರಳಿದ್ದರು. ಆದರೆ ಈ ಪ್ರವಾಸವನ್ನು ಕಾಲೇಜಿನವರು ಆಯೋಜಿಸಿಲ್ಲ ಎಂದು ತಿಳಿಸಿದ್ದಾರೆ.
ಪ್ರಾಂಶುಪಾಲರ ಪ್ರಕಾರ ಬಸ್ ನಲ್ಲಿ ಒಟ್ಟು 40 ವಿದ್ಯಾರ್ಥಿಗಳು ಇದ್ದರು. 33 ವಿದ್ಯಾರ್ಥಿಗಳು ಕಮಲಾ ನೆಹರು ಕಾಲೇಜಿನವರಾಗಿದ್ದರೆ, ಇತರರು ಇತರ ಕಾಲೇಜುಗಳಿಗೆ ಸೇರಿದವರಾಗಿದ್ದರು.
ಪೊಲೀಸರ ಪ್ರಕಾರ ಹರ್ಯಾಣದಿಂದ ಮನಾಲಿಗೆ ತೆರಳುತ್ತಿದ್ದ HR 38 AB 0007 ಸಂಖ್ಯೆಯ ಪ್ರವಾಸಿ ಬಸ್ ಮನಾಲಿ-ಚಂಡೀಗಢ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 41 ಮಂದಿ ಗಾಯಗೊಂಡಿದ್ದಾರೆ ಎಂದು ಶುಕ್ರವಾರ ತಿಳಿಸಿದ್ದರು.