ಹೊಸದಿಗಂತ ವರದಿ, ದಾವಣಗೆರೆ:
ಅಪಘಾತಗೊಂಡಿದ್ದ ಬೈಕ್ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಾಯಕೊಂಡ ಠಾಣೆ ಹೆಡ್ ಕಾನ್ಸಟೇಬಲ್ ಶನಿವಾರ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಜಿಲ್ಲೆಯ ದಾವಣಗೆರೆ ತಾಲೂಕು ಮಾಯಕೊಂಡ ಪೊಲೀಸ್ ಠಾಣೆ ಮುಖ್ಯಪೇದೆ ಹೊನ್ನೂರಸ್ವಾಮಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದವರು. ಕಳೆದ ಜ.31ರಂದು ಅಪಘಾತಕ್ಕೀಡಾಗಿದ್ದ ಬೈಕ್ ಬಿಟ್ಟುಕೊಡಲು ಹೊನ್ನೂರು ಗೊಲ್ಲರಹಟ್ಟಿ ಗ್ರಾಮದ ಚಂದ್ರಪ್ಪ ಎಂಬುವರಿಗೆ ಹೆಡ್ ಕಾನ್ಸಟೇಬಲ್ ಹೊನ್ನೂರುಸ್ವಾಮಿ 6,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ 1,000 ರೂ. ಹಣವನ್ನು ಮುಂಗಡವಾಗಿ ಪಡೆದುಕೊಂಡು, ಇನ್ನುಳಿದ 5,000 ರೂ. ಲಂಚದ ಹಣವನ್ನು ಶನಿವಾರ ತಂದುಕೊಡುವಂತೆ ಹೊನ್ನೂರುಸ್ವಾಮಿ ತಿಳಿಸಿದ್ದರು.
ಮಾಯಕೊಂಡ ಪೊಲೀಸ್ ಠಾಣೆ ಹೊರಾವರಣದಲ್ಲಿ ಶನಿವಾರ ಚಂದ್ರಪ್ಪ ಬಳಿ 5,000 ರೂ. ಲಂಚದ ಹಣ ಪಡೆಯುವಾಗ ಹೊನ್ನೂರುಸ್ವಾಮಿ ಲೋಕಾಯುಕ್ತದ ಬಲೆಗೆ ಬಿದ್ದಿದ್ದಾರೆ. ಸಧ್ಯ ಆರೋಪಿ ಹೊನ್ನೂರುಸ್ವಾಮಿಯನ್ನು ದಸ್ತಗಿರಿ ಮಾಡಲಾಗಿದೆ. ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬ.ಸೂರಿನ, ಸಿ.ಮಧುಸೂದನ್, ಹೆಚ್.ಎಸ್.ರಾಷ್ಟ್ರಪತಿ ನೇತೃತ್ವದ ಸಿಬ್ಬಂದಿ ತಂಡ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ.