ಹೊಸದಿಗಂತ ವರದಿ, ಬೆಳಗಾವಿ:
ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಸೀನಿಮಯ ರೀತಿಯಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ನಗರದ ಕೆಎಲ್ಇ ಡೆಂಟಲ್ ಕಾಲೇಜ್ ಬಳಿ ಶುಕ್ರವಾರ ದಾಳಿ ನಡೆಸಿರುವ ಎಪಿಎಂಸಿ ಪೊಲೀಸರು ಚಿನ್ನದ ವ್ಯಾಪಾರಿಯೊಬ್ಬರಿಂದ ಹಣ ಪಡೆಯುವಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಗಿ ಗ್ರಾಮದ ಚಿನ್ನಾಭರಣ ವ್ಯಾಪಾರಿ ಪರಶುರಾಮ ಬಂಕಾಪುರ ಎಂಬವರಿಗೆ ಅನಧಿಕೃತ ವ್ಯಾಪಾರ ಮಾಡುತ್ತಿರುವುದಾಗಿ ಬೆದರಿಸಿ ಐದು ಲಕ್ಷ ಹಣಕ್ಕೆ ಬೇಡಿಕೆಯಿಟಿದ್ದ ಈ ಐಟಿ ಅಧಿಕಾರಿ ಆ ಮೊತ್ತದಲ್ಲಿನ 40 ಸಾವಿರ ರೂ.ಗಳನ್ನು ಪಡೆಯುವಾಗ ಪೊಲೀಸರು ಹೆಣೆದ ಬಲೆಗೆ ಬಿದ್ದಿದ್ಧಾರೆ.
ದಿನಕ್ಕೊಂದು ಲೊಕೆಷನ್ ಕಳಿಸಿ ಹಣ ತರುವುಂತೆ ಪೀಡಿಸುತ್ತಿದ್ದ ಈ ಅಧಿಕಾರಿ ಕುರಿತು ಚಿನ್ನದ ವ್ಯಾಪಾರಿ ಪರುಶುರಾಮ್ ಬಂಕಾಪುರ ಅವರು, ಮಾರ್ಕೆಟ್ ವಿಭಾಗದ ಎಸಿಪಿ ನಾರಯಣ ಬರಮನಿಯವರಿಗೆ ದೂರು ನೀಡಿದ್ದರು. ಅದರಂತೆ ತಮ್ಮ ತಂಡವನ್ನು ಕಳುಹಿಸಿದ್ದ ಎಸಿಪಿಯವರು ಕರಾರುವಕ್ಕಾಗಿ ದಾಳಿ ಮಾಡಿ ಅಧಿಕಾರಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.