ಹೊಸದಿಗಂತ ವರದಿ ಪುತ್ತೂರು:
ಗೋವಂಶದ ಬಲಿ/ ಹತ್ಯೆ, ಅಕ್ರಮ ಗೋಸಾಗಾಟವಾಗದಂತೆ ಕ್ರಮ ವಹಿಸುವಂತೆ ಹಾಗೂ ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತಹ ಯಾವುದೇ ಕೃತ್ಯಗಳು ನಡೆಯದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಪುತ್ತೂರು ನಗರ ಠಾಣಾ ಪೋಲಿಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020 ಹಾಗೂ ಕರ್ನಾಟಕ ಪ್ರಾಣಿ ಬಲಿ ನಿಷೇಧ 1959 ( ತಿದ್ದುಪಡಿ 1975 )ಇದು ಜಾರಿಯಲ್ಲಿದ್ದು, ಅದರ ಪ್ರಕಾರ ಯಾವುದೇ ಗೋವಂಶ (ಯಾವುದೇ ವಯಸ್ಸಿನ ದನ, ಎತ್ತು, ಹೋರಿ ಕರುಗಳ) ಗಳ ಬಲಿ / ಕುರ್ಬಾನಿ/ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿದೆ.
ಇದೇ ಜೂ. 29, 30 ಮತ್ತು ಜುಲೈ 1 ರಂದು ಕುರ್ಬಾನಿಯ ಸಾಧ್ಯತೆಗಳಿದ್ದು .ಈ ದಿನದಂದು ಹಾಗೂ ಇತರೆ ದಿನಗಳಂದು ಯಾವುದೇ ರೀತಿಯ ಗೋ ವಂಶ ವಧೆ/ಬಲಿ/ಕುರ್ಬಾನಿ/ ಹತ್ಯೆ ಹಾಗೂ ಅಕ್ರಮ ಗೋಸಾಗಾಟವಾಗದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಅಗ್ರಹಿಸಲಾಗಿದೆ.
ಈ ಸಂದರ್ಭ ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಬಜರಂಗದಳ ಜಿಲ್ಲಾ ಸುರಕ್ಷ ಪ್ರಮುಖ್ ಜಯಂತ್ ಕುಂಜೂರುಪಂಜ, ಬಜರಂಗದಳ ಪುತ್ತೂರು ನಗರ ಪ್ರಖಂಡ ಸಂಯೋಜಕ ಹರೀಶ್ ದೋಳ್ಪಾಡಿ, ಪುತ್ತೂರು ನಗರ ಪ್ರಖಂಡ ಪ್ರಚಾರ ಪ್ರಸಾರ ಪ್ರಮುಖ್ ಭರತ್ ಬಲ್ನಾಡು, ಗ್ರಾಮಾಂತರ ಪ್ರಖಂಡ ಸಾಪ್ತಾಹಿಕ ಮಿಲನ್ ಪ್ರಮುಖ್ ಪ್ರಜ್ವಲ್ ಸಂಪ್ಯ, ಗ್ರಾಮಾಂತರ ಪ್ರಖಂಡ ಸುರಕ್ಷಾ ಪ್ರಮುಖ್ ದಿನೇಶ್ ತಿಂಗಳಾಡಿ, ಪ್ರಮುಖರಾದ ಧನರಾಜ್ ಬೆಳ್ಳಿಪ್ಪಾಡಿ, ಯಕ್ಷಿತ್, ನಿಶಾಂತ್, ಪ್ರದೀಪ್ ಉಪಸ್ಥಿತರಿದ್ದರು.