ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೈಂದೂರು ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಾಕಷ್ಟು ಅನುದಾನ ನೀಡಿದೆ ಎಂದು ಬೈಂದೂರು- ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ ಹೇಳಿದರು.
ಇಂದು ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೂ.1500 ಕೋಟಿ ಮೊತ್ತದ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಾಗಿದ್ದು, ಈ ಕಾಮಗಾರಿಗಳ ಕೆಲಸವನ್ನುಶೀಘ್ರ ಪ್ರಾರಂಭಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿ ಕೊಡಬೇಕು ಎಂದು ಸೂಚಿಸಿದರು.
ಬೈಂದೂರು ಕ್ಷೇತ್ರದ ಸರ್ಕಾರಿ ಸ್ಥಳಗಳಲ್ಲಿ 160 ಕ್ಕೂ ಹೆಚ್ಚು ದೇವಸ್ಥಾನ, 60ಕ್ಕೂ ಅಧಿಕ ನಾಗಬನಗಳಿದ್ದು ಇದನ್ನು ಧಾರ್ಮಿಕ ಕ್ಷೇತ್ರದ ಹೆಸರಿಗೆ ಮಂಜೂರು ಮಾಡಲು ಕ್ರಮಕೈಗೊಳ್ಳಬೇಕು. ಅದೇ ರೀತಿ ಗೋಮಾಳ,ರುದ್ರಭೂಮಿ ಸ್ಥಳಗಳ ಗಡಿ ಗುರುತು ಮಾಡಿ ಉತ್ತುವರಿ ಮಾಡದಂತೆ ರಕ್ಷಿಸಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ತಾಲೂಕಿಗೆ ಕಾಲಸಂಕಗಳು ಮಂಜೂರು ಆಗಿದ್ದು ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಗೊಳಿಸಲು ಮತ್ತು ಬೈಂದೂರು ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ 23 BSNL ಟವರ್ಗಳು ಮಂಜುರಾತಿಯಾಗಿದ್ದು, ಶೀಘ್ರ ಸ್ಥಳ ಗುರುತು ಮಾಡಲು ಸೂಚನೆ ನೀಡಲಾಗಿದೆ ಎಂದರು.
ಅದೇ ರೀತಿ ಇತ್ತೀಚೆಗೆ ಹೆಚ್ಚುತ್ತಿರುವ ಮಾದಕ ವಸ್ತು ಅಕ್ರಮ ಸರಾಯಿ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು .