ಹೊಸದಿಗಂತ ಡಿಜಿಟಲ್ ಡೆಸ್ಕ್
ಸೌರಶಕ್ತಿಯಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದ್ದು, ಈ ಹೆದ್ದಾರಿಗಳ ಮೂಲಕ ಹೆವಿ ಡ್ಯೂಟಿ ಟ್ರಕ್ಗಳು ಮತ್ತು ಬಸ್ಗಳನ್ನು ಚಾರ್ಜ್ ಮಾಡಲು ಅನುಕೂಲವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ.
ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (IACC) ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಂದ್ರ ಸರ್ಕಾರವು ವಿದ್ಯುತ್ ಮೂಲಕ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಬಯಸುತ್ತದೆ ಎಂದೂ ತಿಳಿಸಿದರು.
ವಿದ್ಯುತ್ ಚಲನಶೀಲತೆಗಾಗಿ ಸೌರ ಮತ್ತು ಪವನ ಶಕ್ತಿ ಆಧಾರಿತ ಚಾರ್ಜಿಂಗ್ ಕಾರ್ಯವಿಧಾನಗಳನ್ನು ಕೇಂದ್ರ ಸರ್ಕಾರವು ಪ್ರೋತ್ಸಾಹಿಸುತ್ತಿದೆ. ನಾವು ಸೌರಶಕ್ತಿಯಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸಹ ಕೆಲಸ ಮಾಡುತ್ತಿದ್ದೇವೆ ಮತ್ತು ಇದು ಚಾಲನೆಯಲ್ಲಿರುವಾಗ ಹೆವಿ ಡ್ಯೂಟಿ ಟ್ರಕ್ಗಳು ಹಾಗೂ ಬಸ್ಗಳನ್ನು ಚಾರ್ಜ್ ಮಾಡಲು ಅನುಕೂಲವಾಗುತ್ತದೆ ಎಂದೂ ಕೆಂದ್ರ ಸಚಿವರು ಹೇಳಿದರು.
ನೀವು ಸಾಮಾನ್ಯ ಹೆದ್ದಾರಿಗಳಲ್ಲಿ ಪ್ರಯಾಣಿಸಿರುತ್ತೀರಾ? ಆದರೆ, ಎಲೆಕ್ಟ್ರಿಕ್ ಹೆದ್ದಾರಿ ಅಂದರೆ ಏನು ಅಂತೀರಾ? ಹೆದ್ದಾರಿ ರಸ್ತೆ ಮೇಲೆ ಪ್ರಯಾಣಿಸುವ ವಾಹನಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ. ಹಾಗೂ, ಓವರ್ಹೆಡ್ ಪವರ್ ಲೈನ್ಗಳನ್ನು ಸಹ ಈ ಹೈವೇ ರೋಡ್ ಒಳಗೊಂಡಿರುತ್ತದೆ. ಇದರ ಜತೆಗೆ, ಟೋಲ್ ಪ್ಲಾಜಾಗಳನ್ನು ಸಹ ಸೌರಶಕ್ತಿಯಿಂದ ಚಾಲಿತಗೊಳಿಸಲು ಕೇಂದ್ರ ಸರ್ಕಾರವು ಪ್ರೋತ್ಸಾಹಿಸುತ್ತಿದೆ ಎಂದೂ ನಿತಿನ್ ಗಡ್ಕರಿ ಹೇಳಿದರು.
ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯವು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ, ಹೊಸ ವ್ಯವಹಾರಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದ. ಅಲ್ಲದೆ, ನಾವು 26 ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇಗಳನ್ನು ನಿರ್ಮಿಸುತ್ತಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದರು. ಈ ಮಧ್ಯೆ, ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಪ್ರಾರಂಭವಾಗಿದ್ದು, ಈ ಹಿನ್ನೆಲೆ ಇನ್ಮುಂದೆ ಯೋಜನೆಗಳು ವೇಗವಾಗಿ ಅನುಮತಿ ಪಡೆಯುತ್ತವೆ ಮತ್ತು ಇದು ಲಾಜಿಸ್ಟಿಕ್ ವೆಚ್ಚವನ್ನು ಕಡಿತಗೊಳಿಸುತ್ತದೆ ಎಂದೂ ಹೇಳಿದರು.
ಭಾರತ ಮತ್ತು ಯುಎಸ್ ಎರಡೂ ನೈಸರ್ಗಿಕ ಪಾಲುದಾರರು .ಭಾರತದ ಲಾಜಿಸ್ಟಿಕ್ಸ್, ರೋಪ್ವೇಗಳು ಮತ್ತು ಕೇಬಲ್ ಕಾರ್ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಯುಎಸ್ ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸಿದರು. ಈ ಮಧ್ಯೆ, ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಸುಮಾರು 3 ಕೋಟಿ ಮರಗಳನ್ನು ನೆಡಲಾಗುವುದು ಮತ್ತು ಹೆದ್ದಾರಿಗಳ ನಿರ್ಮಾಣ ಹಾಗೂ ವಿಸ್ತರಣೆಯ ಸಂದರ್ಭದಲ್ಲಿ ಮೋದಿ ಸರ್ಕಾರವು ಮರ ನೆಡುವ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದೆ. ಮತ್ತು ಇಲ್ಲಿಯವರೆಗೆ ನಾವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ 27,000 ಮರಗಳನ್ನು ಯಶಸ್ವಿಯಾಗಿ ಕಸಿ ಮಾಡಿದ್ದೇವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದರು.