ನೇಹಾ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದಿಂದ ಸರ್ವಾಧಿಕಾರಿ ಮಾನಸಿಕತೆ: ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ:

ಇಸ್ಲಾಂ ದೇಶಗಳಲ್ಲಿ ಮುಸ್ಲೀಮರ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಭಾರತದಲ್ಲಿ ಮಾತ್ರ ವೇಗವಾಗಿ ಹೆಚ್ಚಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿ ಕಾಲೇಜು ಯುವತಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಾವೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಿಂದ ಮುಸ್ಲಿಮರನ್ನು ಓಡಿಸಲು ಹುನ್ನಾರ ನಡೆದಿದೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇಡೀ ಜಗತ್ತಿನಲ್ಲಿ ಎಲ್ಲಾದರೂ ಮುಸ್ಲಿಂಮರು ಸುರಕ್ಷತೆಯಿಂದ ಇದ್ದರೆ ಅದು ಭಾರತದಲ್ಲಿ ಮಾತ್ರ. ಇದನ್ನು ಮೊದಲು ಡಿ.ಕೆ. ಶಿವಕುಮಾರ್ ಅರ್ಥ ಮಾಡಿಕೊಳ್ಳಲಿ‌. ಅವರ ಜನಸಂಖ್ಯೆ ಅತಿ ವೇಗವಾಗಿ ಬೆಳೆಯುತ್ತಿರುವುದು ಭಾರತ ದೇಶದಲ್ಲಿ ಮಾತ್ರ.ಇಸ್ಲಾಂ ದೇಶದಲ್ಲಿ ಇವರ ಜನಸಂಖ್ಯೆ ಕಡಿಮೆ ಆಗುತ್ತಿದೆ. ಡಿ.ಕೆ. ಶಿವಕುಮಾರ್ ಅವರು ಓಟಿನ ರಾಜಕಾರಣಕ್ಕಾಗಿ ತುಷ್ಟಿಕರಣಕ್ಕಾಗಿ ಹಾಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಇನ್ನು ಸಾವಿನ ಮನೆಯಲ್ಲಿ ಬಿಜೆಪಿ ರಾಜಕಾರಣ ಮಾಡ್ತಿದೆ ಎಂಬ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ನೇಹಾ ಸಾವಿಗೆ ಕಾರಣ ಯಾರು? ಸಾವಿಗೆ ಕಾರಣವಾದ ವ್ಯವಸ್ಥೆ ಯಾವುದು?ಹಾಡು ಹಗಲೇ ಕಾಲೇಜು ಕ್ಯಾಂಪಸ್ ಗೆ ಹೋಗಿ 9 ಬಾರಿ ಇರಿದು ವಿದ್ಯಾರ್ಥಿನಿ ಕೊಲೆ ಮಾಡಿದ್ದಾನೆ. ಇಂಥ ವಾತಾವರಣ ಉಂಟಾಗಲು ಕಾರಣ ಯಾರು? ಯಾಕಂದರೆ ಅವರಿಗೆ ಕಾನೂನಿನ ಭಯ ಇಲ್ಲ, ಪೋಲೀಸರ ಭಯ ಇಲ್ಲ, ಶಿಕ್ಷೆಯ ಭಯಾನೂ ಇಲ್ಲ. ಅವರಿಗೆ ಸರ್ಕಾರದ ರಕ್ಷಣೆ ಇದೆ. ಅದಕ್ಕೆ ಇಂಥ ಘಟನೆ ನಡೆದಿವೆ. ವಿದ್ಯಾರ್ಥಿನಿ ಕೊಲೆ ಆದರೂ ಪ್ರತಿಭಟನೆ ಮಾಡಬಾರದು ಎಂದರೆ ಇದು ಸರ್ಕಾರದ ಸರ್ವಾಧಿಕಾರಿ ಮಾನಸಿಕತೆ. ಸರ್ವಾಧಿಕಾರಿ ಮಾನಸಿಕತೆಯಿಂದ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆ ಇರುವುದಕ್ಕೆ ಬಿಜೆಪಿಯವರು ನೇಹಾ ಮನೆಗೆ ಹೋಗಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತಿರಲಿಲ್ಲ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂಥ ಘಟನೆ ಹಲವು ಬಾರಿ ಆದಾಗ ಎಲ್ಲಾ ಕಡೆ ಪ್ರತಿಭಟನೆ ಮಾಡಿದ್ದೇವೆ. ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕಣ್ಣು ತೆಗೆದು ನೋಡಲು ಹೇಳಿ ಎಂದರು.
ಕಾಂಗ್ರೆಸ್ ನವರು ಅವರ ಪ್ರಣಾಳಿಕೆಯಲ್ಲಿ ಏನು ಸಾಧನೆ ಹೇಳಿದ್ದಾರೆ? ನಮ್ಮ ಜಾಹೀರಾತಿನಲ್ಲಿ ರಾಜ್ಯ ಸರಕಾರದ ವೈಫಲ್ಯ ಬಿಂಬಿಸಿದ್ದೇವೆ. ಅವರಿಗೆ ಅದನ್ನು ತಡೆದುಕೊಳ್ಳುವ ಶಕ್ತಿ ಇಲ್ಲ ಎಂದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಹೆಚ್ಚಾಗಲಿದೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಅಚ್ಷರಿ ವ್ಯಕ್ತಲಡಿಸಿ,ಯಾವ ಪುಣ್ಯಾತ್ಮ ಹೇಳಿದ್ನಪಾ ಎಂದು ಪ್ರಶ್ನಿಸಿದ ಅವರು, ಅವರಿಗೆ ರಾಜಕೀಯ ಅನುಭವ ಇನ್ನೂ ಆಗಬೇಕಿದೆ. ಕಾಂಗ್ರೆಸ್ ಅವಧಿಯಲ್ಲಿ ಆದಂತಹ ಕೋಮು ಗಲಭೆಗಳು ದೇಶದಲ್ಲಿರಬಹುದು ರಾಜ್ಯದಲ್ಲಿರಬಹುದು ಯಾವ ಪಕ್ಷದ ಅವಧಿಲೂ ಆಗಿಲ್ಲ. ನಮ್ಮ ಕಾಲದಲ್ಲಿ ಯಾವುದೇ ಕೋಮುಗಲಭೆ ನಡೆದಿಲ್ಲ.ಬೇಕಾದರೆ ದಾಖಲೆ ತೆಗೆದು ನೋಡಲಿ ಎಂದು ಸವಾಲು ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!