ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಟಿ ರವಿ ಅವರು ತನ್ನ ವಿರುದ್ಧ ಅಸಂವಿಧಾನಿಕ ಪದವನ್ನು ಬಳಸಿ ನಿಂದಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತ್ ಶಾ ಹೇಳಿಕೆ ಖಂಡಿಸಿ ಪರಿಷತ್ನಲ್ಲಿ ಇಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಾತಿನ ಚಕಮಕಿ ನಡೆಯವಾಗ ನನ್ನ ವಿರುದ್ಧ ಸಿಟಿ ರವಿ ಅಸಂವಿಧಾನಿಕ ಪದವನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಭಾಪತಿ ಕಲಾಪ ಮುಂದೂಡಿದ ವೇಳೆ ಅ ಪದ ಬಳಕೆ ಮಾಡಿದ್ದಾರೆ. ಹತ್ತು ಬಾರಿ ಸಿಟಿ ರವಿ ಆ ಪದವನ್ನು ಬಳಕೆ ಮಾಡಿದ್ದಾರೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ದೂರಿದರು. ಹೆಬ್ಬಾಳ್ಕರ್ ಮಾತಿಗೆ ಕಾಂಗ್ರೆಸ್ ಸದಸ್ಯರು ಧ್ವನಿ ಗೂಡಿಸಿದರು. ನಂತರ ಸ್ಪೀಕರ್ ಹೊರಟ್ಟಿ ಕಚೇರಿಗೆ ತೆರಳಿದ ಲಕ್ಷ್ಮಿ ಹೆಬ್ಬಾಳ್ಕರ್ ಸಿಟಿ ರವಿ ಸದಸ್ಯತ್ವ ರದ್ದು ಮಾಡುವಂತೆ ದೂರು ನೀಡಿದರು. ದೂರು ಸ್ವೀಕರಿಸಿದ ಸ್ಪೀಕರ್ ವಿಡಿಯೋ ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯ ಶರವಣ ಹೇಳಿದ್ದೇನು?
ಈ ಬಗ್ಗೆ ಜೆಡಿಎಸ್ ಪರಿಷತ್ ಸದಸ್ಯ ಶರವಣ ಮಾತನಾಡಿ, ಅಂಬೇಡ್ಕರ್ ವಿಚಾರವಾಗಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ನಡುವೆ ಸದನದಲ್ಲಿ ವಾಕ್ಸಮರ ನಡೆಯುತ್ತಿತ್ತು. ಸದನದ ಒಳಗಡೆ ನಾವೆಲ್ಲ ಪ್ರತಿಭಟನೆ ಮಾಡುತ್ತಿದ್ದೇವು. ಸ್ಪೀಕರ್ 10 ನಿಮಿಷ ಮುಂದೂಡಿಕೆ ಮಾಡಿದ್ರು. ಆಗ ಕೊಲೆಗಡುಕ ಡ್ರಗ್ಗಿಸ್ಟ್ ಪದ ಬಂತು. ನಾನು ಕೂಡ ಸಿಟಿ ರವಿ ಹತ್ತರದಿಂದ ನೋಡಿದ್ದೇನೆ. ಯಾವದೇ ಅಶ್ಲೀಲ ಪದ ಬಳಕೆ ನನ್ನ ಗಮನಕ್ಕೆ ಬಂದಿಲ್ಲ. ಅಂತ ಪದ ಬಳಕೆ ಮಾಡಿಲ್ಲ ಅಂದುಕೊಂಡಿರುವೆ ಎಂದು ಸಿಟಿ ರವಿ ಪರ ಬ್ಯಾಟಿಂಗ್ ಮಾಡಿದರು.