August 30, 2026
Sunday, August 30, 2026
spot_img

ಮಟ್ಕಾ ದಂಧೆ ವಿಷಯ ಗೊತ್ತಿದ್ದರೂ ಸುಮ್ಮನಿದ್ದರಾ ಪಿಎಸ್‌ಐ? ಬಸನಗೌಡ ಬಿರಾದರ ಅಮಾನತು

ಹೊಸದಿಗಂತ ವರದಿ ಹಾವೇರಿ:

ಕರ್ತವ್ಯ ಲೋಪ ಆರೋಪದಡಿ ತಾಲೂಕಿನ ಗುತ್ತಲ ಪೊಲೀಸ್ ಠಾಣೆಯ ಪಿಎಸ್‌ಐ ಬಸನಗೌಡ ಬಿರಾದಾರ ಅವರನ್ನು ಅಮಾನತು ಮಾಡಿ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಆದೇಶಿಸಿದ್ದಾರೆ. 

ಗುತ್ತಲ ಪಟ್ಟಣದಲ್ಲಿ ಸೋಮವಾರ ನಾಡಕಚೇರಿ ಉದ್ಘಾಟನೆಗೆ ತೆರಳಿದ್ದ ಡೆಪ್ಯೂಟಿ ಸ್ಪೀಕರ್, ಶಾಸಕ ರುದ್ರಪ್ಪ ಲಮಾಣಿಗೆ ಸ್ಥಳೀಯರು ಮುತ್ತಿಗೆ ಹಾಕಿದ್ದರು. ಪಟ್ಟಣದ ಪ್ರಾಥಮಿಕ ಹೆಣ್ಣು ಮಕ್ಕಳ ಸರ್ಕಾರಿ ಶಾಲೆ ಬಳಿ ರಾಜಾರೋಷವಾಗಿ ಮಟ್ಕಾ ದಂಧೆ ನಡೆಯುತ್ತಿದ್ದರೂ ಪೊಲೀಸರು ತಡೆಯುತ್ತಿಲ್ಲ, ಸ್ಥಳೀಯವಾಗಿ ಬೀದಿನಾಯಿ ಕಾಟ, ಕಸದ ಸಮಸ್ಯೆ ಹೆಚ್ಚಾಗಿದೆ ಎಂದು ದೂರಿದ್ದರು.

ಇದರಿಂದ ಎಚ್ಚೆತ್ತ ಶಾಸಕರು ಪಕ್ಕದಲ್ಲೇ ಮಟ್ಕಾ ಬರೆಯುತ್ತಿದ್ದ ಅಡ್ಡೆ ಮೇಲೆ ನೇರವಾಗಿ ದಾಳಿ ಮಾಡಿ, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಮಟ್ಕಾ ದಂಧೆಕೋರರನ್ನು ಹಿಡಿಯಲು ಶಾಸಕರೇ ಬರಬೇಕಾಯಿತು. ಈ ವಿಷಯ ಗೊತ್ತಿದ್ದರೂ ಮೌನವಾಗಿದ್ದ ಪಿಎಸ್‌ಐ ಅಮಾನತು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಆರೋಪದಡಿ ಗುತ್ತಲ ಠಾಣೆ ಪಿಎಸ್‌ಐ ಬಸನಗೌಡ ಬಿರಾದಾರ ಅವರನ್ನು ಅಮಾನತು ಮಾಡಿ ಐಜಿಪಿ ರವಿಕಾಂತೇಗೌಡ ಆದೇಶಿಸಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !