ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಬಂಡಾಯ ಶಾಸಕರ ಸಂಖ್ಯೆ ಏರಿಕೆಯಾಗುತ್ತಿದ್ದು ಗುವಾಹಟಿಯೆಡೆಗೆ 40ಕ್ಕೂ ಹೆಚ್ಚು ಶಾಸಕರು ಪ್ರಯಾಣ ಬೆಳೆಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆಡಳಿತಾರೂಢ ಎಂವಿಪಿ ಸರ್ಕಾರದ ಬಲ ಕುಸಿಯಲಿದ್ದು ಸರ್ಕಾರ ಬೀಳುವುದು ಬಹುತೇಕ ಪಕ್ಕಾ ಆಗಿದೆ. ಪರಿಸ್ಥಿತಿ ನಿಭಾಯಿಸಲು ಶಿವಸೇನೆಯ ಪ್ರಮುಖರು ಹೆಣಗಾಡುತ್ತಿದ್ದಾರೆ. ಶಿವಸೇನೆಯೊಂದಿಗೆ ಪುನಃ ರಾಜಿಯಾಗುವ ಮಾತೇ ಇಲ್ಲವೆಂದು ಬಂಡಾಯದ ಬಾವುಟ ಹಾರಿಸಿರುವ ಶಿಂಧೆ ಸ್ಪಷ್ಟಪಡಿಸಿದ್ದಾರೆ.
ಇನ್ನು ಎಂವಿಎಯ ಇನ್ನೊಂದು ಮೈತ್ರಿ ಪಕ್ಷವಾದ ಎನ್ಸಿಪಿಯ ನಾಯಕ ಶರದ್ ಪವಾರ್ ಇದು ಶಿವಸೇನೆಯ ಆಂತರಿಕ ವಿಷಯ ಈ ಕುರಿತು ನಾನು ಯಾವುದೇ ಮಾತನಾಡುವುದಿಲ್ಲ ಎಂದು ಮೌನಕ್ಕೆ ಜಾರಿದ್ದಾರೆ. ಮುಂಬೈ ಬಿಟ್ಟು ಎಲ್ಲೂ ಹೋಗದಂತೆ ಬಿಜೆಪಿ ತನ್ನ ಶಾಸಕರಿಗೆ ತಾಕೀತು ಮಾಡಿದೆ. ಇವೆಲ್ಲದರ ನಡುವೆಯೇ ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಮಹಾರಾಷ್ಟ್ರ ವಿಧಾನಸಭೆಯನ್ನು ವಿಸರ್ಜನೆ ಮಾಡುವ ಬಗ್ಗೆ ಶಿವಸೇನೆಯ ಸಂಜಯ್ ರಾವತ್ ಸುಳಿವು ನೀಡಿದ್ದಾರೆ. ‘ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಆಡಳಿತಾರೂಢ ಸರ್ಕಾರದ ಸಂಖ್ಯಾಬಲ ಸದನದಲ್ಲಿ ಈಗಾಗಲೇ ಕುಸಿದಿರುವುದು ಜಗಜ್ಜಾಹೀರಾಗಿದ್ದು ಇನ್ನು ಸದನದಲ್ಲಿ ಸಾಬೀತಾಗುವುದೊಂದು ಉಳಿದಿದೆ.