ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತಿನ ಮೊರ್ಬಿಯಲ್ಲಿ ನಿನ್ನೆ ತೂಗು ಸೇತುವೆ ಕುಸಿದ ಪರಿಣಾಮ ನೂರಾರು ಮಂದಿ ಸಾವನ್ನಪ್ಪಿದ್ದು, ಇದೀಗ ಈ ದುರಂತಕ್ಕೆ ಪ್ರತ್ಯಕ್ಷದರ್ಶಿ ಕಾರಣ ತಿಳಿಸಿದ್ದಾರೆ.
ಶತಮಾನಗಳಷ್ಟು ಹಳೆಯದಾದ ಈ ಸೇತುವೆಯನ್ನು ಏಳು ತಿಂಗಳ ಹಿಂದೆ ದುರಸ್ತಿಗಾಗಿ ಬಂದ್ ಮಾಡಲಾಗಿದ್ದು, ಕೆಲವು ದಿನಗಳ ಹಿಂದೆ ತೆರೆಯಲಾಗಿತ್ತು. ಅಲ್ಲದೆ ಸ್ಥಳೀಯಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ಹಾಗೂ ಸುರಕ್ಷತಾ ಪ್ರಮಾಣ ಪತ್ರ ತೆಗೆದುಕೊಳ್ಳದೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿರುವುದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇದರ ನಡುವೆ ದುರಂತ ನಡೆದ ದಿನದಂದು ಅಲ್ಲಿದ್ದ ಪ್ರತ್ಯಕ್ಷದರ್ಶಿ ಅಶ್ವಿನ್ ಮೆಹ್ರಾ ನೀಡಿದ ಮಾಹಿತಿ ಅಂತೆ, ಸೇತುವೆ ಕುಸಿದು ಬೀಳುವ ಮುನ್ನ 15 ರಿಂದ 20 ಯುವಕರು ಸೇತುವೆ ಮೇಲಿದ್ದ ಲೋಹದ ಹಗ್ಗವನ್ನು ಎಳೆಯುತ್ತಿದ್ದಲ್ಲದೆ ಒದೆಯುತ್ತಿದ್ದರು ಎಂದು ಹೇಳಿದ್ದಾರೆ.
ಇದಾದ ಬಳಿಕವೇ ಸೇತುವೆ ಕುಸಿದು ಬಿತ್ತು ಎಂದು ಅವರು ಹೇಳಿದ್ದು, ಆದರೆ ಕೇವಲ ಒದೆಯುವ ಮೂಲಕವೇ ಸೇತುವೆ ಕುಸಿದು ಬಿದ್ದಿದೆ ಎಂದರೆ ಅದೆಷ್ಟರ ಮಟ್ಟಿಗೆ ಸುರಕ್ಷಿತವಾಗಿತ್ತು ಎಂಬ ಪ್ರಶ್ನೆ ನೆಟ್ಟಿಗರಿಂದ ಕೇಳಿ ಬರುತ್ತಿದೆ.