ರಾಜತಾಂತ್ರಿಕ ಮಾತುಕತೆ ಫಲಪ್ರದ: ಹಡಗಿನಲ್ಲಿರುವ ಎಲ್ಲಾ ಭಾರತೀಯರ ಬಿಡುಗಡೆಗೆ ಇರಾನ್ ಸಮ್ಮತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಸಂಘರ್ಷದಲ್ಲಿ ಸಿಲುಕಿದ್ದ 17 ಭಾರತೀಯ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಬಿಡಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ.

ಇರಾನ್ ವಶಪಡಿಸಿಕೊಂಡ ಹಡಗಿನಲ್ಲಿದ್ದ 25 ಸಿಬ್ಬಂದಿಗಳ ಪೈಕಿ 17 ಭಾರತೀಯ ಸಿಬ್ಬಂದಿಗಳಿದ್ದರು.

ಇರಾನ್ ವಶದಲ್ಲಿರುವ 17 ಸಿಬ್ಬಂದಿಗಳ ಪೈಕಿ ಈಗಾಗಲೇ ಮಹಿಳಾ ಸಿಬ್ಬಂದಿ ಬಿಡುಗಡೆಯಾಗಿ ಭಾರತ ಸೇರಿಕೊಂಡಿದ್ದಾರೆ. ಇನ್ನುಳಿದ 16 ಸಿಬ್ಬಂದಿಗಳ ಬಿಡುಗಡೆಗೆ ಇರಾನ್ ಒಪ್ಪಿಗೆ ಸೂಚಿಸಿದೆ.
ಭಾರತದ ರಾಜತಾಂತ್ರಿಕ ಮಾತುಕತೆಗೆ ಇರಾನ್ ಶರಣಾಗಿದೆ. ಹಡಗಿನಲ್ಲಿರುವ ಭಾರತೀಯ ಸಿಬ್ಬಂದಿಗಳು ತವರಿಗೆ ಮರಳಲು ಸ್ವತಂತ್ರರು ಎಂದು ಇರಾನ್ ರಾಯಭಾರ ಕಚೇರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ಭಾರತದಲ್ಲಿ ಸಂಭ್ರಮ ಮನೆ ಮಾಡಿದೆ.

ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರವ ಇರಾನ್ ಈಗಾಗಲೇ ಇಸ್ರೇಲ್ ಮೂಲದ ಎಂಸಿಎಸ್ ಏರೀಸ್ ಹಡಗನ್ನು ವಶಪಡಿಸಿಕೊಂಡಿತ್ತು. ಏಪ್ರಿಲ್ 13ರಂದು ಇರಾನ್ ಸೇನೆ ದಾಳಿ ನಡೆಸಿತ್ತು. ದುಬೈ ವ್ಯಾಪ್ತಿಯ ಸಮುದ್ರದಲ್ಲಿ ಈ ಹಡಗನ್ನು ಇರಾನ್ ವಶಕ್ಕೆ ಪಡೆದಿತ್ತು. ಈ ಹಡಗಿನಲ್ಲಿದ್ದ ಒಟ್ಟು 25 ಸಿಬ್ಬಂದಿಗಳ ಪೈಕಿ 17 ಭಾರತೀಯ ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿದ್ದರು.

ಈ ಮಾಹಿತಿ ಹೊರಬೀಳುತ್ತಿದ್ದಂತೆ ಭಾರತೀಯ ವಿದೇಶಾಂಗ ಇಲಾಖೆ ತಕ್ಷಣವೇ ಇರಾನ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿತ್ತು. . ಇದರ ಪರಿಣಾಮವಾಗಿ ಇರಾನ್ ವಶದಲ್ಲಿರುವ ಭಾರತೀಯ ಸಿಬ್ಬಂದಿಗಳ ಭೇಟಿಗೆ ಇರಾನ್ ಅವಕಾಶ ನೀಡಿತ್ತು. ಇದೇ ವೇಳೆ ಭಾರತೀಯ ಅಧಿಕಾರಿಗಳು ಸಿಬ್ಬಂದಿಗಳ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

ಈ ಘಟನೆ ಬಳಿಕ ರಾಜತಾಂತ್ರಿಕ ಮಾತುಕತೆ ತೀವ್ರಗೊಳಿಸಿದ ಭಾರತ, ಮಹತ್ವದ ಗೆಲುವು ಸಾಧಿಸಿತ್ತು. ಹಡಗಿನಲ್ಲಿದ್ದ ಮಹಿಳಾ ಸಿಬ್ಬಂದಿ ಟೀಸಾ ಜೊಸೆಫ್‌ನ್ನು ಇರಾನ್ ಬಿಡುಗಡೆ ಮಾಡಿತ್ತು. ಇಂದು ತೀಸಾ ಜೊಸೆಫ್ ಕೇರಳಕ್ಕೆ ಮರಳಿದ್ದರು. ಇದರ ಬೆನ್ನಲ್ಲೇ ಬಾಕಿ ಉಳಿದ 16 ಭಾರತೀಯ ಸಿಬ್ಬಂದಿಗಳ ಬಿಡುಗಡೆಗೆ ಇರಾನ್ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲೇ ಈ ಸಿಬ್ಬಂದಿಗಳು ಭಾರತಕ್ಕೆ ಮರಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!