ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ. ನಾಯಕರ ನಡುವಿನ ಭಿನ್ನಮತ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಆರಂಭವಾಗಿದೆ. ಶಾಸಕ ಬಿ.ಆರ್. ಪಾಟೀಲ, ರಾಯರೆಡ್ಡಿ ಹಾಗೂ ಸತೀಶ ಜಾರಕಿಹೊಳಿ ಗುಂಪುಗಾರಿಕೆ ಸಂಗತಿಗಳು ಇದಕ್ಕೆ ಸಾಕ್ಷಿ ಎಂದರು.
ಕಾಂಗ್ರೆಸ್ ನವರಿಗೆ ರಾಷ್ಟ್ರೀಯ ನಾಯಕತ್ವದ ಭಯವಿಲ್ಲ. ಸರಿಮಾಡುವ, ಸಂಬಾಳಿಸಲು ಸಹ ಆಗಲ್ಲ. ಜಗಳ ಅತಿರೇಕಕ್ಕೆ ಹೋಗಿದೆ. ಇದು ಆಡಳಿತದ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಗುಂಪುಗಳ ಮಧ್ಯೆ ಹೊಂದಾಣಿಕೆ ಇಲ್ಲ. ಪರಿಸ್ಥಿತಿ ಅಯೋಮಯವಾಗಿದೆ. ಜನ ಬರೀ ಇವರ ಜಗಳ ನೋಡುವುದೇ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಯಾರು ಆಗಬೇಕು ಎಂಬ ಚರ್ಚೆ ಮತ್ತೆ ಆರಂಭವಾಗಿದೆ. ಸಿದ್ದರಾಮಯ್ಯವರನ್ನು ಕೇಳಗೆ ಇಳಿಸಬೇಕು ಎಂಬ ಚರ್ಚೆ ಜೋರಾಗಿದೆ ಎಂದರು.
ಶಶಿ ತರೂರ್ ಸಭೆಯಲ್ಲಿಯೂ ಸಹ ಸಿಎಂ ಬದಲಾವಣೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಅವರು ಅದಕ್ಕೆ ಉತ್ತರ ನೀಡಿಲ್ಲ ಎಂದು ನುಡಿದರು.