ಹೊಸದಿಗಂತ ವರದಿ ಶಿವಮೊಗ್ಗ:
ಶಿವಮೊಗ್ಗ; ಎಸ್ಐಆರ್ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಮನೆಯೊಂದರಲ್ಲಿ ಸಾಕಿದ ನಾಯಿ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿರುವ ಘಟನೆ ಸಾಗರ ತಾಲೂಕಿನ ಆನಂದಪುರದಲ್ಲಿ ನಡೆದಿದೆ.
ಬಿ.ಎಲ್.ಓ ಲಕ್ಷ್ಮಿ ಸಿಂಗ್ ತಮ್ಮ ನಿಯೋಜಿತ ಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮನೆ-ಮನೆ ಸಮೀಕ್ಷೆಯ ಕರ್ತವ್ಯದಲ್ಲಿದ್ದರು. ಈ ಸಂದರ್ಭದಲ್ಲಿ ಮನೆಯೊಂದರ ಬಳಿ ತೆರಳಿದಾಗ, ಅಲ್ಲಿ ಸಾಕಲಾಗಿದ್ದ ನಾಯಿಯೊಂದು ದಿಢೀರನೆ ಅವರ ಮೇಲೆ ಮುಗಿಬಿದ್ದಿದೆ. ನಾಯಿಯು ಲಕ್ಷ್ಮಿ ಸಿಂಗ್ ಅವರ ಕಾಲಿಗೆ ಬಲವಾಗಿ ಕಚ್ಚಿದ್ದು, ಅವರು ತೀವ್ರವಾಗಿ ರಕ್ತಸ್ರಾವದಿಂದ ಬಳಲಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಹಾಗೂ ಸಹೋದ್ಯೋಗಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಲಕ್ಷ್ಮಿ ಸಿಂಗ್ ಅವರನ್ನು ರಕ್ಷಿಸಿದ್ದಾರೆ. ಗಾಯಾಳುವನ್ನು ತಕ್ಷಣವೇ ಆನಂದಪುರದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೋರಿಸಿ ನಂತರ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೇಬಿಸ್ ರೋಗದ ಮುನ್ನೆಚ್ಚರಿಕೆಯಾಗಿ ರೇಬಿಸ್ ನಿರೋಧಕ ಲಸಿಕೆ ನೀಡಿದ್ದಾರೆ. ಸದ್ಯ ಲಕ್ಷ್ಮಿ ಸಿಂಗ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಗುಣಮುಖರಾಗುತ್ತಿದ್ದಾರೆ.
ಇದನ್ನೂ ಓದಿ:
ಸಾರ್ವಜನಿಕರ ಮತ್ತು ಸಹೋದ್ಯೋಗಿಗಳ ಆತಂಕ:
ಸರ್ಕಾರಿ ಕರ್ತವ್ಯದ ಮೇಲಿರುವ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಮತ್ತು ಸುರಕ್ಷತೆಯ ಅಗತ್ಯವಿದೆ ಎಂದು ಸಹೋದ್ಯೋಗಿಗಳು ಒತ್ತಾಯಿಸಿದ್ದಾರೆ. ಚುನಾವಣಾ ವಿಭಾಗದ ಹಿರಿಯ ಅಧಿಕಾರಿಗಳು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದು, ಗಾಯಾಳು ಅಧಿಕಾರಿಯ ಆರೋಗ್ಯ ವಿಚಾರಿಸಿದ್ದಾರೆ.



