ಹೊಸದಿಗಂತ ವರದಿ, ಮಂಡ್ಯ :
ಅಯೋಧ್ಯೆಯಿಂದ ಬಂದಿರುವ ರಾಮ ಮಂತ್ರಾಕ್ಷತೆ ಸುಖ, ನೆಮ್ಮದಿ ಹಾಗೂ ಅಭಿವೃದ್ಧಿಯ ಸಂಕೇತವಾಗಿದೆ. ರಾಮನಲ್ಲಿದ್ದ 16 ಸಾತ್ವಿಕ ಗುಣಗಳು ಪ್ರತೀ ಹಿಂದೂವಿನಲ್ಲಿ ಬರುವಂತಾಗಲಿ ಎಂಬ ಆಶಯದೊಂದಿಗೆ ಪ್ರತೀ ಮನೆ ಮನೆಗೂ ಮಂತ್ರಾಕ್ಷತೆ ವಿತರಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ತಿಳಿಸಿದರು.
ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದಿರುವ ಪವಿತ್ರ ಮಂತ್ರಾಕ್ಷತೆ ಮತ್ತು ಕರಪತ್ರ ವಿತರಣೆ ಹಾಗೂ ಮನೆಮೇಲೆ ಹಾರಿಸುವ ಧ್ವಜವನ್ನು ವಿತರಿಸುವ ಕಾರ್ಯವು ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿನ ನಿವಾಸಿಗಳ ಮನೆ ಮನೆಗೆ ರಾಮ ಸೀತೆ, ಲಕ್ಶ್ಮಣ,ಮಾರುತಿ ವೇಷಧಾರಿಗಳೊಂದಿಗೆ ತೆರಳಿ ವಿತರಿಸಿ ಅವರು ಮಾತನಾಡಿದರು.
ಹಿಂದೂ ಧರ್ಮದಲ್ಲಿ ಅಕ್ಕಿ ಅಥವಾ ಅಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ನಾವು ಯಾವುದೇ ದೇವರ ಸನ್ನಿಧಾನಕ್ಕೆ ಭೇಟಿ ನೀಡಿದರೂ ಅಲ್ಲಿ ಮಂತ್ರಾಕ್ಷತೆಯನ್ನು ಪ್ರಸಾದ ಹಾಗೂ ದೇವರ ಆಶೀರ್ವಾದದ ರೂಪದಲ್ಲಿ ನೀಡಲಾಗುತ್ತಿದೆ. ಅದೇ ಮಾದರಿಯಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ವಿತರಿಸುತ್ತಿದ್ದೇವೆ ಎಂದು ಹೇಳಿದರು.
ಕೋಟ್ಯಂತರ ಹಿಂದೂಗಳು ಕಾತುರದಿಂದ ಕಾಯುತ್ತಿದ್ದ ಪ್ರಭು ಶ್ರೀರಾಮನ ಮಂದಿರ ಜ.22ರಂದು ಲೋಕಾರ್ಪಣೆಗೊಳ್ಳುತ್ತಿದ್ದು, ಇಂತಹ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿರುವ ನಾವೇ ಧನ್ಯರು. ಇನ್ನಾದರೂ ವಿರೋಧ ಬಿಟ್ಟು, ಭಾರತೀಯ ಮಕ್ಕಳು ಹೆಮ್ಮೆಪಡುವ ದಿನಗಳಲ್ಲಿ ನಿಂತಿದ್ದೇವೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳೋಣ ಎಂದರು.
ಶ್ರೀರಾಮ ಹುಟ್ಟಿದ ನೆಲದಲ್ಲಿಯೇ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನಾಯ ನಡೆಯುತ್ತಿದೆ, ರಾಮನೂರಿನಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನೂರಾರು ಕರಸೇವಕರು ತಮ್ಮ ಅಮೂಲ್ಯವಾದ ಪ್ರಾಣವನ್ನು ತ್ಯಾಗಮಾಡಿದ್ದಾರೆ. ಲಕ್ಷಾಂತರ ಮಂದಿ ಹೋರಾಟದ ಫಲವಾಗಿ ನಾವು ಇಂತಹ ಸತ್ಕಾರ್ಯದಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಸಂಭ್ರಮದಿಂದ ನುಡಿದರು.
ಜ.22ರಅದು 5 ದೀಪಗಳನ್ನು ಹಚ್ಚಿ ಲೋಕಕಲ್ಯಾಣಕ್ಕೆ ಸಾಕ್ಷಿಯಾಗಿ ಧ್ಯನ್ಯತಾಭಾವ ಪಡೆಯಿರಿ, ರಾಮ, ಲಕ್ಷ್ಮಣ, ಸೀತೆ, ಆಂಜನೇಯನ ಹೆಸರಿನಲ್ಲಿ 4 ದೀಪಗಳಿದ್ದರೆ, ದೇಶಕ್ಕಾಗಿ ಒಂದು ದೀಪ ಹಚ್ಚಿ, ಒಟ್ಟು ಐದು ದೀಪಗಳನ್ನು ಹಚ್ಚುವುದರ ಮೂಲಕ ಬೆಳಕಿನಲ್ಲಿ ನಾವು ಧನ್ಯತಾ ಭಾವವನ್ನು ಪಡೆಯೋಣ. ಹಬ್ಬದ ರೀತಿ ಮನೆ ಮಂದಿಯಲ್ಲ ಸಂಭ್ರಮದಿಂದ ಪಾಲ್ಗೊಂಡು ಶ್ರೀರಾಮಾಂಜನೇಯನ ಕೃಪೆಗೆ ಪಾತ್ರಗುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಮ ಸೀತೆ, ಲಕ್ಷ್ಮಣ ,ಮಾರುತಿ ವೇಷಧಾರಿಗಳಾದ ರಾಯನ್, ಜನಕನಾರಾಯಣ್, ಧನ್ವಿ, ದೀಪಕ್, ನವೀನ್, ಎಂ.ಬಿ. ರಮೇಶ್, ಶಿವರಾಜ್, ಅರ್ಚಕ ನವೀನ್ ಮತ್ತು ರಾಮಭಕ್ತರು ಹಾಜರಿದ್ದರು.