ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಕೆದಾಟು ಯೋಜನೆ ಜಾರಿಗೆ ತರುವಂತೆ ಕಾಂಗ್ರೆಸ್ ಪಟ್ಟು ಹಿಡಿದು ಹೋರಾಟ ನಡೆಸಿತ್ತು. ಈಗ ಬಜೆಟ್ ಮೂಲಕ ತಮ್ಮ ಪಾದಯಾತ್ರೆಗೆ ಫಲ ಸಿಕ್ಕಿತು. ಆದರೆ ಕಳೆದ ವರ್ಷ ಘೋಷಿಸಿದ್ದ ಸಿಲಿಕಾನ್ ಸಿಟಿಯ ಯೋಜನೆಗಳು ಈಡೇರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು, ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಬಜೆಟ್ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿರುವುದು ಸ್ವಾಗತಾರ್ಹ. ನೀರಿನ ವಿಷಯದಲ್ಲಿ ಕರ್ನಾಟಕವನ್ನು ಸ್ವಾವಲಂಬಿಯಾಗಿಸುವ ಈ ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಸಲಾದ ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕನ್ನಡಿಗರಿಗೂ ಇದರ ಪ್ರತಿಫಲ ಸಲ್ಲುತ್ತದೆ. ಇದು ನಮ್ಮೆಲ್ಲರ ಗೆಲುವು. ಸಾಮೂಹಿಕ ಹೋರಾಟದಿಂದ ಹಕ್ಕುಗಳನ್ನು ಪಡೆಯಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಆದರೆ, ಕಳೆದ ಸಾಲಿನ ಬಜೆಟ್ನಲ್ಲಿ ಬೆಂಗಳೂರು ನಗರಕ್ಕೆ ಘೋಷಿಸಿದ್ದ ₹ 7,795 ಕೋಟಿ ವೆಚ್ಚದ ಕಾರ್ಯಕ್ರಮವನ್ನು ಸರ್ಕಾರ ಒಂದು ವರ್ಷ ಕಳೆದರೂ ಈಡೇರಿಸಿಲ್ಲ ಎಂಬುದು ಗಮನಾರ್ಹ. ಹಾಗಾಗಿ ಮಹತ್ವಾಕಾಂಕ್ಷೆಯ ಯೋಜನೆಗೆ ಸಾವಿರ ಕೋಟಿ ರೂಪಾಯಿ ಘೋಷಣೆ ಕೇವಲ ಭರವಸೆಯಾಗಿ ಉಳಿಯದೆ ತ್ವರಿತವಾಗಿ ಕಾರ್ಯಗತಗೊಳ್ಳಬೇಕು.