ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬೆಳ್ಳಂಬೆಳಗ್ಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ರೈತರ ಜತೆ ನೇರ ಮಾತುಕತೆ ನಡೆಸಿದ್ದಾರೆ. ಈರುಳ್ಳಿ ಮಂಡಿಗೆ ಭೇಟಿ ನೀಡಿ ಈರುಳ್ಳಿ ಚೀಲದ ಮೇಲೆಯೇ ಕುಳಿತುಕೊಂಡು ಏನೆಲ್ಲಾ ಸಮಸ್ಯೆಗಳಾಗುತ್ತಿವೆ ಎಂದು ಕೇಳಿ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ.
ಇನ್ನು ಮಾರುಕಟ್ಟೆ ಪರಿಶೀಲನೆ ವೇಳೆ ರಸ್ತೆ ಬದಿಯೇ ಇದ್ದ ಸಣ್ಣ ಪೆಟ್ಟಿಗೆ ಅಂಗಡಿಯಲ್ಲಿ ಇಡ್ಲಿ ಮಾರುತ್ತಿದ್ದುದನ್ನು ಕಂಡ ಸಿಎಂ ಅಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕರ ಜತೆ ತಿಂಡಿ ಮಾಡಿದ್ದಾರೆ.
ತಮ್ಮ ಜತೆ ಕುಳಿತಿದ್ದ ಕಾರ್ಮಿಕರು ತಿಂದ ತಿಂಡಿಯ ಬಿಲ್ನ್ನೂ ಸಿಎಂ ನೀಡಿದ್ದಾರೆ. ಪೆಟ್ಟಿಗೆ ಅಂಗಡಿಯವರು ಹಣ ಸ್ವೀಕರಿಸಲು ಮುಜುಗರ ಮಾಡಿಕೊಂಡಿದ್ದು, ಮೂರು ಪ್ಲೇಟ್ ಇಡ್ಲಿಗೆ ಸಿಎಂ 500 ರೂಪಾಯಿ ಕೊಟ್ಟಿದ್ದಾರೆ. ಚಿಲ್ಲರೆ ಬೇಡ ನನ್ನ ಜತೆ ತಿಂಡಿ ತಿಂದ ಇಬ್ಬರು ಕಾರ್ಮಿಕರ ಬಳಿ ಹಣ ಪಡೆಯಬೇಡಿ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಎಂ ಕಾರ್ಮಿಕರ ಜತೆ ಕುಳಿತು ಇಡ್ಲಿ ತಿನ್ನುತ್ತಿರುವ ಫೋಟೊ ವೈರಲ್ ಆಗಿದ್ದು, ಡಿಕೆಶಿ ಸರಳ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದೇ ರೀತಿ ಅಧಿಕಾರಿ ಹೊಂದಿದವರು ದಿಢೀರ್ ಭೇಟಿ ಮಾಡಿ ಸ್ಥಳಗಳ ಪರಿಶೀಲನೆ ಮಾಡಿದರೆ ಎಲ್ಲ ಕೆಟ್ಟ ವ್ಯವಸ್ಥೆಗಳು ಬಯಲಿಗೆ ಬರುತ್ತವೆ. ಡಿಕೆಶಿ ಸಿಎಂ ಆಗಿರುವ ಅವಧಿಯಲ್ಲೇ ಉತ್ತಮ ಬದಲಾವಣೆಗಳನ್ನು ಕಾಣಬಹುದು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.



