ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಹಬ್ಬ ಮೈಸೂರು ದಸರಾ ಯಾವುದೇ ಆತಂಕ-ಅಡಚಣೆಯಿಲ್ಲದೆ ನೆರವೇರಿದ್ದು, ಉತ್ಸವ ಯಶಸ್ವಿಗೆ ಕಾರಣರಾದ ಎಲ್ಲ ಅಧಿಕಾರಿಗಳಿಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧನ್ಯವಾದ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ʻಈ ಬಾರಿ ದಸರಾ ಹಬ್ಬ ಬಹಳ ಅಚ್ಚುಕಟ್ಟಾಗಿ ಯಾವುದೇ ತೊಂದರೆಯಿಲ್ಲದೆ ನೆರವೇರಿದೆ. ಇದಕ್ಕಾಗಿ ಶ್ರಮಿಸಿದ ಅಧಿಕಾರ ವರ್ಗ, ಪೊಲೀಸ್ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇನೆʼ ಎಂದರು. ಮುಂದಿನ ವರ್ಷದಿಂದ ಬರೀ ಮೈಸೂರು ಭಾಗದ ಅಧಿಕಾರಿಗಳು ಮಾತ್ರವಲ್ಲದೆ, ರಾಜ್ಯಮಟ್ಟದಲ್ಲಿಯೂ ಎಲ್ಲಾ ಅಧಿಕಾರಿಗಳನ್ನೂ ಪಾಲೊಳ್ಳುವಂತೆ ಮಾಡಬೇಕಿದೆ ಎಂಬ ಮಾತನ್ನು ಹೇಳಿದರು.
ಮುಂಬರುವ ವರ್ಷಗಳಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವಕ್ಕೆ ಹೊಸ ಮೆರಗುನ್ನು ನೀಡಬೇಕು. ಈ ಕುರಿತು ಮುಖ್ಯಮಂತ್ರಿಗಳ ಜೊತೆಯೂ ಮಾತನಾಡುತ್ತೇನೆ. ದಸರಾ ಥೀಮ್, ಸ್ತಬ್ಧ ಚಿತ್ರಗಳ ಪ್ರದರ್ಶನ ಸೇರಿದಂತೆ ಕೆಲ ವಿಚಾರಗಳಲ್ಲಿ ಹೊಸತನ ಬೇಕಿದೆ ಎಂದರು. ಟ್ಯಾಬ್ಲೂ ಸ್ಪರ್ಧೆಯನ್ನು ಪ್ರತಿ ಜಿಲ್ಲೆಯಲ್ಲೂ ಆಯೋಜಿಸುವುದು, ಅತಿಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡುವ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡಬೇಕಿದೆ ಎಂದರು.