ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೌದು…ನಿಮಗೆ ಗೊತ್ತೇ? ನೀವು ಸೇವಿಸುವ ಆಹಾರ ಕ್ರಮ ಸರಿಯಿದೆಯೆಂದು? ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಬೆಳಗ್ಗೆ ಉಪಾಹಾರ ಸೇವನೆ, ಮಧ್ಯಾಹ್ನದ ಊಟ ಹೇಗಿರಬೇಕೆಂಬುದನ್ನು ನೋಡೋಣ. ಬೆಳಗ್ಗಿನ ಉಪಾಹಾರ ದೇಹಕ್ಕೆ ಶಕ್ತಿ ನೀಡುವಂತಹುದು. ಉಪಾಹಾರದಲ್ಲಿ ಏನೇನಿರಬೇಕು ಎಂಬುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಬೆಳಗ್ಗೆ ಶಾಲಾ ಕಾಲೇಜುಗಳಿಗೆ ತೆರಳುವ ತುರಾತುರಿ ಕೆಲವರಿಗಾದರೆ, ಕಚೇರಿಗಾಗಿ ಬೇಗೆದ್ದು ಹೋಗುವವರು ಇನ್ನು ಕೆಲವರು. ಅಯ್ಯೋ ಇಷ್ಟು ಬೇಗ ಯಾಕೆ ಏಳಬೇಕೆಂಬ ಆಸಲೀ ಪ್ರವೃತ್ತಿ ಮತ್ತೆ ಕೆಲವರದ್ದು. ತಮ್ಮ ದೈನಂದಿನ ಒತ್ತಡಗಳಿಗಳಿಂದಾಗಿ ಅನೇಕ ಮಂದಿಗೆ ಉಪಾಹಾರಕ್ಕೆ ಪ್ರಾಮುಖ್ಯತೆ ಕೊಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅನೇಕ ತೊಂದರೆ ಉಂಟಾಗುತ್ತವೆ. ಬೆಳಗ್ಗೆ ಏನು ಸಿಗುತ್ತೋ ಅದನ್ನೇ ಸೇವಿಸಿ, ಅಷ್ಟಕ್ಕೆ ತೃಪ್ತಿ ಪಡುವ ಮಂದಿಯೂ ಅನೇಕರಿರುತ್ತಾರೆ.
ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುದು ಹಿತವಲ್ಲ. ಖಾಲಿ ಹೊಟ್ಟೆಯಲ್ಲಿ ಕಾಫಿ/ಟೀ ಕುಡಿದರೆ ಜೀರ್ಣ ಸಮಸ್ಯೆ ಉಂಟಾಗುತ್ತದೆ. ಬೆಳಗ್ಗಿನ ಉಪಾಹಾರಕ್ಕೆ ಸಿಹಿ ತಿಂಡಿಯನ್ನು ಖಂಡಿತಾ ಅವಲಂಬಿಸಬೇಡಿ. ಸಿಹಿಯಾದ ಉಪಾಹಾರ ಸೇವನೆಯಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಏರಲು ಕಾರಣವಾಗುತ್ತದೆ. ಪ್ರೊಟೀನ್ ಮತ್ತು ಕೊಬ್ಬಿನಂಶವಿರುವ ಆಹಾರ ಸೇವಿಸಿದರೆ ದಿನವಿಡೀ ಹಸಿವು ಕಡಿಮೆಯಾಗುತ್ತದೆ. ಮಧ್ಯಾಹ್ನ ಮಿತವಾದ ಊಟವಿರಲಿ. ಬೇಳೆ ಕಾಳುಗಳು,ನಾರಿನಂಶ ಹೊಂದಿರುವ ತರಕಾರಿಗಳನ್ನು ಹೆಚ್ಚು ಹೆಚ್ಚಾಗಿ ಬಳಸುವುದು ಉತ್ತಮ.
ಹಣ್ಣುಗಳು: ಬೆಳಗ್ಗೆ ಒಂದು ಬಟ್ಟಲು ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರ ಅಭ್ಯಾಸವೆಂದು ಹಲವರು ಪರಿಗಣಿಸುತ್ತಾರೆ. ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು ಎಂದು ಹೇಳಲಾಗುತ್ತದೆ. ಹಣ್ಣುಗಳು ಬೇಗನೆ ಜೀರ್ಣವಾಗುವುದರಿಂದ, ಮತ್ತೆ ಒಂದು ಗಂಟೆಯೊಳಗೆ ಹಸಿವು ಉಂಟಾಗುತ್ತದೆ. ಕೆಲವು ರೀತಿಯ ಸಿಟ್ರಸ್ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಆಮ್ಲೀಯತೆಯನ್ನು ಉಂಟುಮಾಡಬಹುದು.