ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023-24ರ ಆಟಗಾರರ ವಾರ್ಷಿಗೆ ಕೇಂದ್ರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಅದರಲ್ಲಿ ಅಚ್ಚರಿಯ ಸಂಗತಿಯೆಂದರೆ ಬಿಸಿಸಿಐ ಮಾತನ್ನು ಕಡೆಗಣಿಸಿದ್ದ ಶ್ರೇಯಸ್ ಅಯ್ಯರ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ಅವರನ್ನು ತನ್ನ ಒಪ್ಪಂದದಿಂದ ಹೊರಗಿಟ್ಟಿದೆ.
ಬಿಸಿಸಿಐನ ಕೇಂದ್ರ ಗುತ್ತಿಗೆಯಲ್ಲಿರುವ ಆಟಗಾರರು ಐಪಿಎಲ್ಗಿಂತ ರಣಜಿ ಟ್ರೋಫಿಯೇ ಮುಖ್ಯವಾಗಿ ಆಡಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಎಚ್ಚರಿಕೆಯನ್ನೂ ನಿರ್ಲಕ್ಷ್ಯ ಮಾಡಿದ್ದ ಕ್ರಿಕೆಟಿಗರಾದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಇದೀಗ ದೊಡ್ಡ ದಂಡ ತೆತ್ತಿದ್ದಾರೆ.
ಟೀಮ್ ಇಂಡಿಯಾದ ಎಲ್ಲಾ ಗುತ್ತಿಗೆ ಕ್ರಿಕೆಟಿಗರಿಗೆ ಎಚ್ಚರಿಕೆ ನೀಡಿದ್ದ ಕಾರ್ಯದರ್ಶಿ ಜಯ್ ಷಾ, ಯಾವೆಲ್ಲಾ ಆಟಗಾರರು ದೇಶೀಯ ಕ್ರಿಕೆಟ್ ಆಡುವುದನ್ನು ನಿರ್ಲಕ್ಷ್ಯ ಮಾಡುತ್ತಾರೋ ಅವರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದರು. ಆದರೆ, ಜಯ್ ಶಾ ಎಚ್ಚರಿಕೆಗೂ ಬಗ್ಗದೇ ಇದ್ದ ಆಟಗಾರರು ರಣಜಿ ಟ್ರೋಫಿಯಲ್ಲಿ ಆಡಲು ನಿರಾಕರಿಸಿದ್ದರು.
ಕರ್ನಾಟಕದ ಕೆಎಲ್ ರಾಹುಲ್, ಶುಭ್ಮನ್ ಗಿಲ್ ಹಾಗೂ ಮೊಹಮದ್ ಸಿರಾಜ್ ಅವರನ್ನು ಗ್ರೇಡ್-ಎ ವಿಭಾಗಕ್ಕೆ ಸೇರಿಸಲಾಗಿದೆ. ಇನ್ನು ರಸ್ತೆ ಅಪಘಾತದ ಕಾರಣದಿಂದಾಗಿ ಇಡೀ ಕ್ರಿಕೆಟ್ ಋತುವನ್ನು ಕಳೆದುಕೊಂಡಿರುವ ಅನುಭವಿ ವಿಕೆಟ್ ಕೀಪರ್ ರಿಷಭ್ ಪಂತ್ ಬಿ ದರ್ಜೆಗೆ ಹಿನ್ನಡೆ ಕಂಡಿದ್ದಾರೆ. ಕಳೆದ ವರ್ಷ ಎ ದರ್ಜೆಯಲ್ಲಿದ್ದ ಆಲ್ರೌಂಡರ್ ಅಕ್ಸರ್ ಪಟೇಲ್ ಗೂ ಬಿ ದರ್ಜೆಗೆ ಹಿನ್ನಡೆ ಕಂಡಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್ ಹಾಗೂ ಮೊಹಮದ್ ಸಿರಾಜ್ ಎ ದರ್ಜೆಯಲ್ಲಿ ಉಳಿದುಕೊಳ್ಳಲು ಯಶಸ್ವಿಯಾಗಿದ್ದಾರೆ. ಇನ್ನು ಟೀಮ್ ಇಂಡಿಯಾದ ಅಗ್ರ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಅವರಿಗೆ ಕೇಂದ್ರ ಗುತ್ತಿಗೆ ಅಗ್ರ ದರ್ಜೆಯಾದ ಎ ಪ್ಲಸ್ ವಿಭಾಗ ಪಡೆದುಕೊಂಡಿದ್ದಾರೆ.
ಈ ಹಂತದ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎನ್ನುವುದನ್ನು ಗಮನಿಸಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಹಿ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಲ್ಲಾ ಅಥ್ಲೀಟ್ಗಳು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಭಾಗವಹಿಸಲು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಸ್ಪಷ್ಟವಾಗಿ ಸೂಚನೆ ನೀಡಿತ್ತು ಎಂದೂ ತಿಳಿಸಲಾಗಿದೆ.
2023-24ಕ್ಕೆ ಬಿಸಿಸಿಐನ ಕೇಂದ್ರ ಗುತ್ತಿಗೆ ವಿವರ
ಗ್ರೇಡ್ A+ (ವಾರ್ಷಿಕ 7 ಕೋಟಿ ರೂಪಾಯಿ): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ.
ಗ್ರೇಡ್ ಎ (ವಾರ್ಷಿಕ 5 ಕೋಟಿ ರೂಪಾಯಿ): ಆರ್ ಅಶ್ವಿನ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ ಬಿ (ವಾರ್ಷಿಕ 3 ಕೋಟಿ ರೂಪಾಯಿ): ಸೂರ್ಯ ಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.
ಗ್ರೇಡ್ ಸಿ (ವಾರ್ಷಿಕ 1 ಕೋಟಿ ರೂಪಾಯಿ): ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.
ವೇಗದ ಬೌಲಿಂಗ್ ಗುತ್ತಿಗೆಯ ಶಿಫಾರಸು: ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ.