ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೌನಿ ಅಮಾವಾಸ್ಯೆಯಂದು ಪ್ರಯಾಗ್ರಾಜ್ ಮಹಾ ಕುಂಭಮೇಳದಲ್ಲಿ 10 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಗಳಿವೆ. ದೊಡ್ಡ ಸಂಖ್ಯೆಯಿಂದಾಗಿ ತ್ರಿವೇಣಿ ಸಂಗಮದಲ್ಲಿ ಜನಸಂದಣಿ ಉಂಟಾಗಿದೆ.
ಈ ಹಿನ್ನೆಲೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯ್, ಸ್ಥಳೀಯ ಭಕ್ತರು 15 ದಿನಗಳ ನಂತರ ಅಯೋಧ್ಯೆಗೆ ಬರಬೇಕು ಅಂತ ಮನವಿ ಮಾಡಿದ್ದಾರೆ.
ಜನವರಿ 29 ಮೌನಿ ಅಮಾವಾಸ್ಯೆಯಂದು, ಲಕ್ಷಾಂತರ ಭಕ್ತರು ಕುಂಭಮೇಳದಲ್ಲಿ ಗಂಗೆಯಲ್ಲಿ ಸ್ನಾನ ಮಾಡಲು ಸಂಗಮದಲ್ಲಿ ಸೇರುತ್ತಾರೆ. ಈ ದಿನ 10 ಕೋಟಿ ಭಕ್ತರು ಆಗಮಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಕುಂಭಮೇಳಕ್ಕೆ ಆಗಮಿಸಿದ ಭಕ್ತರು ಅಯೋಧ್ಯೆಯ ರಾಮಲಲಾನ ದರುಶನ ಪಡೆಯಲು ಆಗಮಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಹೀಗಾಗಿ ಕುಂಭಮೇಳದಿಂದಾಗಿ ಆಯೋಧ್ಯೆಗೆ ಆಗಮಿಸುವ ಭಕ್ತರ ಸಂಖ್ಯೆಯೂ ಏರಿಕೆಯಾಗಿದೆ. ಇದರಿಂದ ರಾಮನಗರಿಯಲ್ಲೂ ಜನಸಂದಣಿ ಹಚ್ಚಾಗಿದೆ. ಜನವರಿ 29ರಂದು ಮೌನಿ ಅಮವಾಸ್ಯೆಯಾಗಿರುವ ಕಾರಣ ಸ್ಥಳೀಯರು ಸಹ ರಾಮ ಮಂದಿರಕ್ಕೆ ಆಗಮಿಸಿದ್ರೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಗಳಿವೆ. ಏಕಕಾಲದಲ್ಲಿ ಕೋಟ್ಯಂತರ ಜನರು ಬಂದ್ರೆ ಭಕ್ತರಿಗೆ ರಾಮ ಲಲಾ ದರುಶನ ಮಾಡಿಸುವುದು ಕಷ್ಟಕರವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯ್ ಹೇಳಿದ್ದಾರೆ.
ಆದ್ದರಿಂದ ಸ್ಥಳೀಯ ಭಕ್ತಾದಿಗಳಿಗೆ ಮುಂದಿನ 15 ದಿನ ರಾಮ ಮಂದಿರಕ್ಕೆ ಬರಬೇಡಿ ಎಂದು ಸಂಪತ್ ರಾಯ್ ಮನವಿ ಮಾಡಿಕೊಂಡಿದ್ದಾರೆ. ಜನಸಂದಣಿ ಕಡಿಮೆಯಾದ ಬಳಿಕ ರಾಮಲಲಾ ದರುಶನ ಪಡೆಯಬಹುದು ಎಂದು ಸಲಹೆಯನ್ನು ಸಹ ನೀಡಿದ್ದಾರೆ.
ಸಂಪತ್ ರಾಯ್ ಅವರ ಮನವಿ
ದೂರದಿಂದ ಬರುವ ಭಕ್ತರಿಗೆ ಸುಲಭವಾಗಿ ದರ್ಶನ ಪಡೆಯಲು, ಸ್ಥಳೀಯ ಭಕ್ತರು 15 ರಿಂದ 20 ದಿನಗಳ ನಂತರ ಅಯೋಧ್ಯೆಗೆ ಬರಬೇಕು ಎಂದು ಸಂಪತ್ ರಾಯ್ ಕೇಳಿಕೊಂಡರು. ಬಸಂತ್ ಪಂಚಮಿಯ ನಂತರ ಫೆಬ್ರವರಿಯಲ್ಲಿ ಹವಾಮಾನವು ಅನುಕೂಲಕರವಾಗಿರುತ್ತದೆ. ಇದರಿಂದ ಭಕ್ತರಿಗೆ ಪ್ರಯಾಣ ಸುಲಭವಾಗುತ್ತದೆ.