ಹೊಸದಿಗಂತ ವರದಿ,ಶಿವಮೊಗ್ಗ:
ಹೊಸ ವರ್ಷದ ಔತಣಕೂಟದಲ್ಲಿ ಮಾಲೀಕ ಖುಷಿಗಾಗಿ ಗಾಳಿಯಲ್ಲಿ ಗುಂಡು ಹಾರಿಸಲು ಮುಂದಾದ ಪರಿಣಾಮ ಡಬಲ್ ಬ್ಯಾರಲ್ ಗನ್ ಮಿಸ್ ಫೈರ್ ಆಗಿ ಇಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ವಿದ್ಯಾನಗರದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ವಿದ್ಯಾನಗರದ ಉದ್ಯಮಿ ಮಂಜುನಾಥ ಓಲೇಕರ್ (67) ಹಾಗೂ ವಿನಯ್ (34) ಮೃತಪಟ್ಟಿದ್ದಾರೆ. ಹೊಸವರ್ಷದ ಅಂಗವಾಗಿ ಮಂಜುನಾಥ ಅವರ ಮನೆಯಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಇವರು ತಮ್ಮ ಮನೆಯಲ್ಲಿದ್ದ ಗನ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಲು ಯತ್ನಿಸಿದಾಗ ಅದು ಆಕಸ್ಮಿಕವಾಗಿ ಫೈರ್ ಆಗಿ ಅಲ್ಲಿಯೇ ಇದ್ದ ವಿನಯ್ ಅವರ ಹೊಟ್ಟೆಗೆ ಗುಂಡು ತಗುಲಿದೆ.
ಗುಂಡು ತಗುಲಿ ಗಾಯಗೊಂಡಿದ್ದನ್ನು ನೋಡುತ್ತಿದ್ದಂತೆ ಮಂಜುನಾಥಗೆ ಹೃದಯಾಘಾತವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ತಕ್ಷಣವೇ ಗಾಯಾಳು ವಿನಯ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ವಿನಯ್ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಈ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.