ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಗೆಲುವಿನ ದಾರಿಯಲ್ಲಿ ಸಾಗುತ್ತಿರುವ ಟೀಮ್ ಇಂಡಿಯಾಕ್ಕೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದ್ದು, ಈಗಾಗಲೇ ಹಾರ್ದಿಕ್ ಪಾಂಡ್ಯ ಮೊಣಕಾಲು ಗಾಯದ ಕಾರಣದಿಂದಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದರ ನಡುವೆ ಶನಿವಾರ ಅಭ್ಯಾಸದ ಅವಧಿಯಲ್ಲಿ ತಂಡದ ಮತ್ತಿಬ್ಬರು ಆಟಗಾರರಿಗೆ ಗಾಯವಾಗಿದೆ.
ವಿರಾಟ್ ಕೊಹ್ಲಿಗೂ ಕೂಡ ಬಲಗಾಲಿನ ತೊಡೆಗೆ ಚೆಂಡು ಬಡಿದು ಗಾಯವಾಗಿದೆ. ಆದರೆ, ಅವರು ಈಗಾಗಲೇ ಚೇತರಿಸಿಕೊಂಡಿದ್ದು, ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಆದರೆ, ಮತ್ತೆ ಇಬ್ಬರು ಆಟಗಾರರ ಲಭ್ಯತೆಯ ಬಗ್ಗೆ ಇನ್ನೂ ಅನುಮಾನಗಳಿವೆ.
ಶನಿವಾರ ತಂಡದ ಅಭ್ಯಾಸ ಅವಧಿಯ ವೇಳೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ತಮ್ಮ ಬಲಗೈ ಮಣಿಕಟ್ಟಿಗೆ ಬಲವಾದ ಪೆಟ್ಟು ತಿಂದಿದ್ದಾರೆ. ಬೌಲಿಂಗ್ ಥ್ರೋಡೌನ್ ಸ್ಪೆಷಲಿಸ್ಟ್ ರಘು ಅವರ ಎಸೆತಗಳನ್ನು ಎದುರಿಸುವ ವೇಳೆ, ಚೆಂಡು ಬಿದ್ದು ಗಾಯವಾಗಿದ್ದು ಸೂರ್ಯಕುಮಾರ್ ಯಾದವ್ ತಮ್ಮ ಮಣಿಕಟ್ಟಿಗೆ ಬ್ಯಾಂಡೇಜ್ಅನ್ನೂ ಕಟ್ಟಿಕೊಂಡಿದ್ದಾರೆ.
ಇನ್ನೊಂದೆಡೆ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುವ ವೇಳೆ ಜೇನುಹಳ ಮುಖಕ್ಕೆ ಕಚ್ಚಿ ಗಾಯಗೊಂಡಿದ್ದಾರೆ.
ಶನಿವಾರ ಸಂಜೆ ಥ್ರೋಡೌನ್ ಸ್ಪೆಷಲಿಷ್ಟ್ ಜೊತೆ ಸೂರ್ಯಕುಮಾರ್ ಯಾದವ್ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಚೆಂಡು ಬಲವಾಗಿ ಅವರ ಮೊಣಕೈಗೆ ಬಡಿದಿದೆ. ತಕ್ಷಣವೇ ತಮ್ಮ ಮೊಣಕೈಗೆ ಅವರು ಬ್ಯಾಂಡೇಜ್ ಕಟ್ಟಿಕೊಂಡಿದ್ದಲ್ಲದೆ, ನಗುತ್ತಲೇ ನೆಟ್ಸ್ ಅಭ್ಯಾಸದಿಂದ ಹೊರನಡೆದಿದ್ದಾರೆ. ಇದರಿಂದ ನ್ಯೂಜಿಲೆಂಡ್ ವಿರುದ್ಧ ಇವರಿಬ್ಬರೂ ಪಂದ್ಯ ಆಡೋದು ಸದ್ಯದ ಪರಿಸ್ಥಿತಿಯಲ್ಲಿ ಅನುಮಾನವಾಗಿದೆ. ಆದರೆ, ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.
ಪಂದ್ಯಕ್ಕೂ ಮುನ್ನ ಕೋಚ್ ರಾಹುಲ್ ದ್ರಾವಿಡ್ ಅವರು ಪತ್ರಿಕಾಗೋಷ್ಠಿಯಲ್ಲಿ ಪಾಂಡ್ಯ ಬಗ್ಗೆ ಅಪ್ಡೇಟ್ ನೀಡಿದರು. ಹಾರ್ದಿಕ್ ಪಾಂಡ್ಯ ನಮಗೆ ಪ್ರಮುಖ ಆಟಗಾರ, ಅವರು ಆಡುವ -11 ರಲ್ಲಿ ಉತ್ತಮ ಸಮತೋಲನವನ್ನು ಸೃಷ್ಟಿಸುತ್ತಾರೆ. ನಾವು ಅತ್ಯುತ್ತಮ ಪ್ಲೇಯಿಂಗ್-11 ಅನ್ನು ಆಯ್ಕೆ ಮಾಡಲು ಕೆಲಸ ಮಾಡುತ್ತೇವೆ. ನಾವು ಕೇವಲ 14 ಆಟಗಾರರನ್ನು ಹೊಂದಿದ್ದೇವೆ, ಅವರ ಸುತ್ತ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದಿದ್ದಾರೆ.