ಹೊಸದಿಗಂತ ಡಿಜಿಟಲ್ ಡೆಸ್ಕ್
ಲಂಡನ್ ನ ಲ್ಯಾಂಬೆತ್ ನಲ್ಲಿನ ಥೇಮ್ಸ್ ನದಿಯ ತಟದಲ್ಲಿರುವ ಬಸವೇಶ್ವರರ ಪ್ರತಿಮೆಗೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಭಾನುವಾರ ಭೇಟಿ ನೀಡಿ, ಗೌರವ ನಮನಗಳನ್ನು ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಅವರು,`ಬಸವಣ್ಣ ಅವರ ತತ್ತ್ವ-ಚಿಂತನೆಗಳಿಂದ ಪ್ರೇರಣೆ ಪಡೆದುಕೊಂಡಿರುವ ಕರ್ನಾಟಕವು ಇನ್ನು 25 ವರ್ಷಗಳಲ್ಲಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಜಾಗತಿಕವಾಗಿ ನಾಯಕ ಸ್ಥಾನದಲ್ಲಿ ಪ್ರತಿಷ್ಠಾಪಿತವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯವರು 2014ರಲ್ಲಿ ಉದ್ಘಾಟಿಸಿದ ಈ ಪ್ರತಿಮೆಯು ಇಡೀ ವಿಶ್ವಕ್ಕೇ ಒಂದು ಅಮೂಲ್ಯ ಸಂದೇಶವನ್ನು ಸಾರುತ್ತಿದೆ. ಮೋದಿ ಕೂಡ ಪ್ರಜಾಪ್ರಭುತ್ವದ ಪ್ರಸ್ತಾಪ ಬಂದಾಗಲೆಲ್ಲ ಬಸವಣ್ಣನವರ ಪ್ರಜಾಸತ್ತಾತ್ಮಕ ಪರಿಕಲ್ಪನೆಯಾದ ಅನುಭವ ಮಂಟಪದ ಉಲ್ಲೇಖ ಮಾಡುತ್ತಲೇ ಇರುತ್ತಾರೆ. ಈ ದೃಷ್ಟಿಯಿಂದ ನೋಡಿದರೆ, ಬಸವಣ್ಣನವರು ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವವಾದಿ’ ಎಂದು ಅವರು ಬಣ್ಣಿಸಿದರು.
ಕಾಯಕ, ಜ್ಞಾನ ಮತ್ತು ದಾಸೋಹಗಳಿಗೆ ಪ್ರಾಶಸತ್ಯ ಕೊಡುವ ಮೂಲಕ ಬಸವಣ್ಣನವರು 12ನೇ ಶತಮಾನದಲ್ಲೇ ಉದ್ಯೋಗ, ಶಿಕ್ಷಣ ಮತ್ತು ಆಹಾರ ಭದ್ರತೆಗಳ ಬಗ್ಗೆ ಗಾಢವಾಗಿ ಚಿಂತಿಸಿದ್ದರು. ಜತೆಗೆ ಸಮಾಜವನ್ನು ಅನಪೇಕ್ಷಿತ ನಿರ್ಬಂಧಗಳಿಂದ ಮುಕ್ತಗೊಳಿಸಲು ಅವರು ಪ್ರಾಮಾಣಿಕವಾಗಿ ಶ್ರಮಿಸಿದವರಾಗಿದ್ದಾರೆ ಎಂದರು.