ಹೊಸದಿಗಂತ ವರದಿ, ಧಾರವಾಡ:
ಚೆಂಬೆಳಕಿನ ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಬುಧವಾರ ನಿಧನ ಹೊಂದಿದರು. ಕೆಸಿಡಿ ಆವರಣದಲ್ಲಿ ಕಣವಿ ಅವರ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಜ.15ರಿಂದ ಎಸ್ಡಿಎಂ ಆಸ್ಪತ್ರೆಗೆ ದಾಖಲಾಗಿ ಡಾ.ಕಣವಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆರಂಭದಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಗುಣವಾಗಿದ್ದರು. ನಂತರ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಜಿಲ್ಲಾಡಳಿತದಿಂದ ಅಗತ್ಯ ಚಿಕಿತ್ಸೆಗೆ ಕ್ರಮ ವಹಿಸಲಾಗಿತ್ತು. ಮಾನ್ಯ ಮುಖ್ಯಂತ್ರಿಗಳು ಸ್ವತಃ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಡಾ.ಕಣವಿ ನಿಧನರಾದರು ಎಂದು ತಿಳಿಸಿದರು.
ಕೆಸಿಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ: ಕವಿ ಡಾ.ಚೆನ್ನವೀರ ಕಣವಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಕೆಸಿಡಿ ಆವರಣದಲ್ಲಿ ಜಿಲ್ಲಾಡಳಿತದಿಂದ ಸಿದ್ದತೆ ಮಾಡಲಾಗಿದೆ.
ಅಂತ್ಯಕ್ರಿಯೆ: ನಾಡೋಜ ಡಾ.ಚನ್ನವೀರ ಕಣವಿ ಅವರ ಅಂತ್ಯಕ್ರಿಯೆ ಬುಧವಾರ ಸಂಜೆ ಕೆಲಗೇರಿ ಸಮೀಪದ ಅವರ ಫಾರ್ಮ್ ಹೌಸ್ ನಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.