ಹೊಸದಿಗಂತ ವರದಿ,ತುಮಕೂರು:
ದಾಸೋಹ,ತತ್ವವನ್ನು ಇಡೀ ಪ್ರಪಂಚಕ್ಕೆ ಸಾರಿ ಅನ್ನ, ಆಶ್ರಯ, ಅಕ್ಷರ ಮೂಲಕ ಮಕ್ಕಳ ಬಾಳಿಗೆ ಬೆಳಕು ನೀಡಿದವರು ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು. ಅನ್ನದ ಮಹತ್ವ ಶ್ರೀಗಳಿಗೆ ಬಹಳ ಚೆನ್ನಾಗಿ ಗೊತ್ತಿತ್ತು ಆದ್ದರಿಂದಲೇ ತಮ್ಮನ್ನು ಕಾಣಲು ಬಂದವರಿಗೆ ಮೊದಲು ಅವರು ಪ್ರಸಾದವಾಯಿತೆ ಎಂದು ಕೇಳುತ್ತಿದ್ದರು ಎಂದು ಮಾಜಿ ಮುಖ್ಯ ಮಂತ್ರಿ ಬೆ.ಎಸ್ ಯಡಿಯೂರಪ್ಪ ಸ್ಮರಿಸಿದರು.
ಅಯೋಧ್ಯೆಯಲ್ಲಿ ನಾಳೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು ಈ ಶುಭ ಸಂದರ್ಭವನ್ನು ಎಲ್ಲರೂ ಕಣ್ಣು ತುಂಬಿಕೊಳ್ಳೋಣ. ಈ ಸಂದರ್ಭದಲ್ಲಿ ಶಿವಕುಮಾರ ಸ್ವಾಮೀಜಿ ಶ್ರೀಗಳ ಅನುಪಸ್ಥಿತಿ ಕಾಡುತ್ತಿದೆ ಎಂದು ಹೇಳಿದರು.
ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ್ ಅವರು ಮಾತನಾಡಿ , 12ನೇ ಶತಮಾನದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಅನೇಕ ಆದರ್ಶಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ. ಆ ಆದರ್ಶಗಳನ್ನು ಯಾರಾದರೂ ತಪ್ಪದೇ ಪಾಲಿಸಿದ್ದಾರೆ ಎಂದರೆ ಅದು ಶಿವಕುಮಾರ ಸ್ವಾಮೀಜಿ ಮಾತ್ರ. ಲಕ್ಷಾಂತರ ಮಕ್ಕಳಿಗೆ ಅನ್ನ ಅಕ್ಷರ ವಸತಿ ನೀಡಿ ಅವರ ಬಾಳಿಗೆ ಬೆಳಕು ನೀಡಿದ್ದಾರೆ ಎಂದು ತಿಳಿಸಿದರು.
ಸಚಿವ ಎಂ ಬಿ ಪಾಟೀಲ್ , ಕೆ ಎನ್ ರಾಜಣ್ಣ , ಸಂಸದ ಜಿ.ಎಸ್ ಬಸವರಾಜು, ಶಾಸಕ ಸುರೇಶ್ ಗೌಡ ,ಜ್ಯೋತಿ ಗಣೇಶ್ ,ರಾಜೇಂದ್ರ ರಾಜಣ್ಣ ,ಗುಬ್ಬಿ ಶಾಸಕ ಶ್ರೀನಿವಾಸ್, ನೆಲಮಂಗಲ ಶಾಸಕ ಶ್ರೀನಿವಾಸ್, ಪಾವಗಡ ಶಾಸಕ ವೆಂಕಟೇಶ್, ಮೇಯರ್ ಪ್ರಭಾವತಿ, ನವದೆಹಲಿಯ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ,ಮಾಜಿ ಸಚಿವ ರಾಮಚಂದ್ರ ಗೌಡ,ಜಿಲ್ಲಾಧಿಕಾರಿ ಶುಭಕಲ್ಯಾಣ ,ಜಿಲ್ಲಾ ಪಂಚಾಯತ್ ಸಿಇ ಜಿ ಪ್ರಭು ಅವರುಗಳು ಉಪಸ್ಥಿತರಿದ್ದರು