ಸಂವಿಧಾನ ನಮಗೆ ಧರ್ಮ ಗ್ರಂಥ: ಮುಖ್ಯಮಂತ್ರಿ ಸಿದ್ದರಾಮಯ್ಯ

ಹೊಸದಿಗಂತ ವರದಿ,ತುಮಕೂರು:

ಸಂವಿಧಾನ ನಮಗೆ ಧರ್ಮ ಗ್ರಂಥ ಇದ್ದ ಹಾಗೆ. ಈ ಧರ್ಮ ಗ್ರಂಥದ ಮೂಲಕ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರಯತ್ನವನ್ನು ಸರ್ಕಾರಗಳು ಮಾಡಬೇಕು. ಇದೇ ಸರ್ಕಾರದ ಆಶಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿದ್ಧಗಂಗಾ ಕ್ಷೇತ್ರದಲ್ಲಿ ಇಂದು ನಡೆದ ಡಾ. ಶ್ರೀ ಶಿವಕುಮಾರ ಮಹಾಶಿವಯೋಗಿಗಳ 5ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದಲ್ಲಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಾ, 12ನೇ ಶತಮಾನದಲ್ಲಿ ಬಸವಾದಿ ಶರಣರು ಜಾತಿ,ವರ್ಗರಹಿತವಾದ ವೈಚಾರಿಕತೆಯಿಂದ ಕೂಡಿದ ಸಮಾಜ ನಿರ್ಮಾಣ ಮಾಡಲು ಈ ನಾಡಿನಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿಕೊಟ್ಟು ಹೋಗಿದ್ದಾರೆ ಎಂದು ತಿಳಿಸಿದರು.

ಬಸವಣ್ಣನವರ ಅನೇಕ ಆದರ್ಶ ತತ್ವಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ. ಸಾಮಾಜಿಕ ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆಯನ್ನು ಬಸವಾದಿ ಶರಣರು ತಂದಿದ್ದು ,ಇವರ ಹೋರಾಟದ ಅಂಶವನ್ನು ನಮ್ಮ ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಬಸವಾದಿ ಶರಣರ ಆದರ್ಶವನ್ನು ಕಾಯ,ವಾಚ,ಮನಸ ಮೈಗೂಡಿಸಿಕೊಂಡು ಅದರಂತೆ ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಶಿವಕುಮಾರ ಸ್ವಾಮೀಜಿಯವರು ಮಾಡಿದ್ದಾರೆ ,ಈ ಮೂಲಕ ನುಡಿದಂತೆ ನಡೆದಿದ್ದಾರೆ ಎಂದರು.

ಸಾಮಾಜಿಕ,ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಬದಲಾವಣೆ ತರಬೇಕು ಎಂಬುದೇ ಶ್ರೀಗಳ ಆಶಯವಾಗಿತ್ತು ಎಂದು ತಿಳಿಸಿದ ಮುಖ್ಯಮಂತ್ರಿಗಳು, ಅಕ್ಷರ ಸಂಸ್ಕೃತಿಯಿಂದ ದೂರವಾದ ಜನರು ಸಮಾಜದಲ್ಲಿ ಶೋಷಣೆ ,ದೌರ್ಜನಕ್ಕೆ ಒಳಗಾಗಿದ್ದಾರೆ.ಅಕ್ಷರ ಸಂಸ್ಕಾರ ಪಡೆದವರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಸೇರಿದ್ದಾರೆ . ಈ ರೀತಿ ಅಕ್ಷರ ಜ್ಞಾನದ ಅಸಮಾನತೆಯಿಂದ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಉಂಟಾಗಿರುವುದನ್ನು ಇಂದಿಗೂ ನಾವು ಕಾಣಬಹುದಾಗಿದೆ ಎಂದರು.

ಮನುಷ್ಯ ಮನುಷ್ಯನನ್ನು ಗೌರವಿಸಬೇಕು, ಪ್ರೀತಿಸಬೇಕು. ದ್ವೇಷಿಸುವ ವಾತಾವರಣವಿರಬಾರದು.
ಕಾಯಕ ಮತ್ತು ದಾಸೋಹ ಎರಡೂ ಸಹ ಜೀವನದ ಮೌಲ್ಯಗಳು .ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶ್ರೀ ಸಿದ್ದಗಂಗಾ ಮಠದ ಮಠಾಧಿಪತಿಯಾಗಿ ಶಿವಕುಮಾರ ಸ್ವಾಮೀಜಿಗಳು ಇದನ್ನು ಅನುಸರಿಸುತ್ತಿದ್ದರು. 9 ರಿಂದ 10 ಸಾವಿರ ಮಕ್ಕಳಿಗೆ ಇಂದಿಗೂ ಸಹ ವಿದ್ಯೆ,ವಸತಿ,ಅಕ್ಷರ ಸಿದ್ದಗಂಗಾ ಮಠದಲ್ಲಿ ದೊರಕುತ್ತಿದೆ .ಇದು ಸಾಮಾನ್ಯ ಸಂಗತಿಯಲ್ಲ .ಹೆಚ್ಚಾಗಿ ಉತ್ತರ ಕರ್ನಾಟಕದ ಮಕ್ಕಳೇ ಶ್ರೀಮಠದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಣ ಎಲ್ಲರಿಗೂ ಸಿಗಬೇಕು. ಜ್ಞಾನವಿಕಾಸದಿಂದ ಮಾತ್ರ ನಾವು ಸಮಾಜದಲ್ಲಿ ಗೌರವದಿಂದ ಬದುಕಲು ಸಾಧ್ಯ ಎಂಬುದು ಶ್ರೀಗಳ ಅಭಿಮತವಾಗಿತ್ತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ತಾವು ಸಹ ಬಸವಾದಿ ಶರಣರ ಆದರ್ಶದ ಮೇಲೆ ನಂಬಿಕೆ ಇಟ್ಟವರು .ಆದುದರಿಂದಲೇ ಸಮಾಜದಲ್ಲಿನ ಜನರಿಗಾಗಿ ಆರ್ಥಿಕ, ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಶಕ್ತಿಯನ್ನು ತುಂಬಲಾಗುತ್ತಿದೆ. ಪ್ರಸ್ತುತ ವರ್ಷ 38,000 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಾಗಿ ಖರ್ಚು ಮಾಡಲಾಗುತ್ತಿದೆ ಮತ್ತು ಮುಂದಿನ ವರ್ಷ 68,000 ಕೋಟಿ ರೂಗಳನ್ನು ಖರ್ಚು ಮಾಡಲಾಗುವುದು ಎಂದು ತಿಳಿಸಿದರು.

ಸಹಿಷ್ಣುತೆ,ಸಹಬಾಳ್ವೆಯನ್ನು ಜೊತೆಯಾಗಿಟ್ಟಕೊಂಡು ನಾವೆಲ್ಲರೂ ಬದುಕಬೇಕು ಎಂದು ಕರೆ ನೀಡಿದರು.
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪತ್ರ ಬರೆಯಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!