ಹೊಸದಿಂಗತ ಡಿಜಿಟಲ್ ಡೆಸ್ಕ್:
ದೇವಾಲಯದ ಒಳಗೆ ವಸ್ತ್ರ ಸಂಹಿತೆ ಪಾಲಿಸುವಂತೆ, ವಿದೇಶಿ ವಸ್ತ್ರಗಳು ಹಾಗೂ ತುಂಡುಡುಗೆ ಧರಿಸಿದವರಿಗೆ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶ ನೀಡದಂತೆ ಆರಂಭಿಸಲಾದ ‘ಟೆಂಪಲ್ ಇನ್ಸೈಡ್ ನೋ ವೆಸ್ಟರ್ನ್ ಡ್ರೆಸ್’ ಅಭಿಯಾನ ಮತ್ತೆ ಮುನ್ನೆಲೆಗೆ ಬಂದಿದೆ. ಇಂದಿನಿಂದ ದೇವಾಲಯಗಳಲ್ಲಿ ಅಧಿಕೃತವಾಗಿ ವಸ್ತ್ರಸಂಹಿತೆ ಜಾರಿಯಾಗುತ್ತಿದೆ.
ಕರ್ನಾಟಕದಲ್ಲಿನ ದೇವಸ್ಥಾನ- ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಈ ಹಿಂದೆಯೂ ಇದಕ್ಕೆ ಒತ್ತಾಯ ಮಾಡಲಾಗಿತ್ತು. ಇದನ್ನು ಹಿಂದೂ ಸಂಘಟನೆಗಳು ಬೆಂಬಲಿಸಿದ್ದವು. ದೇವಾಲಯಗಳಲ್ಲಿ ತುಂಡು ಬಟ್ಟೆಗಳನ್ನು ಧರಿಸಿ ಬರುವ ಯುವಕ ಯುವತಿಯರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿತ್ತು.
ಕಳೆದ ತಿಂಗಳು ರಾಜ್ಯದ ಎಲ್ಲಾ ಖಾಸಗಿ ದೇವಾಲಯ ಮತ್ತು ಮಠಗಳ ಅರ್ಚಕರು ಮತ್ತು ಟ್ರಸ್ಟಿಗಳ ಸಭೆ ಮಾಡಲಾಗಿತ್ತು. ಸಭೆಯಲ್ಲಿ ರಾಜ್ಯದ ಎಲ್ಲಾ ಅರ್ಚಕರು ಹಾಗೂ ಟ್ರಸ್ಟಿಗಳು ಜನವರಿಯಿಂದ ಈ ನಿಯಮವನ್ನು ಜಾರಿ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದಿನಿಂದ ರಾಜ್ಯದ ದೇವಾಲಯಗಳು ಭಾರತೀಯ ಉಡುಪುಗಳನ್ನು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ.
ಸಭ್ಯವಾದ ಭಾರತೀಯ ಉಡುಗೆಗಳಿಗೆ ಮಾತ್ರ ಅವಕಾಶ. ಸ್ತ್ರೀಯರು ಸೀರೆ, ಚೂಡಿದಾರ್, ಕುರ್ತಾ ಧರಿಸಬೇಕು. ಪುರುಷರ್ ಪಂಚೆ, ಶೇರ್ವಾನಿ, ಪ್ಯಾಂಟ್, ಅಂಗಿ ಧರಿಸಬೇಕು.
ಈ ಕುರಿತು ದೇವಸ್ಥಾನದ ಎದುರು ಬೋರ್ಡ್ಗಳನ್ನು ಹಾಕುವ ಅಭಿಯಾನ ಇಂದಿನಿಂದ ಶುರುವಾಗುತ್ತಿದೆ. ಇಂದು ಬೆಳಿಗ್ಗೆ 11 ಗಂಟೆಗೆ ವಸಂತನಗರದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದಿಂದ ಈ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಹಿಂದೂ ಸಂಘಟನೆಗಳಿಂದ ಈ ಬಗ್ಗೆ ಅಭಿಯಾನ ನಡೆಯಲಿದೆ.