ಹೊಸದಿಗಂತ ವರದಿ ಮೈಸೂರು:
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯ ಆವರಣದ ಉದ್ಯಾನಕ್ಕೆ ಪವಿತ್ರ ಮೃತ್ತಿಕಾ (ಮಣ್ಣು) ಬಳಸುವ ಉದ್ದೇಶದಿಂದ ಮೈಸೂರಿಗೆ ಆಗಮಿಸಿದ ಕೆಂಪೇಗೌಡ ರಥಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ನಗರದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು.
ಬನ್ನಿ ನಾಡ ಕಟ್ಟೋಣ ಎಂಬ ಸಂದೇಶ ಹೊತ್ತು ಬಂದ ರಥವನ್ನು ಚಾಮುಂಡಿ ಬೆಟ್ಟದಲ್ಲಿ ಪೂರ್ಣ ಕುಂಬದೊಂದಿಗೆ ಸ್ವಾಗತಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವರು, ಕೆಂಪೇಗೌಡ ಅವರ 108 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 11ರಂದು ಅನಾವರಣಗೊಳಿಸಲಿದ್ದಾರೆ. ಉದ್ಯಾನಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಪವಿತ್ರ ಮಣ್ಣು ಸಂಗ್ರಹಿಸಲಾಗುತ್ತದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ ಎಂದರು.
ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಶಾಸಕ ಎಲ್. ನಾಗೇಂದ್ರ, ಎಸ್ .ಎ.ರಾಮದಾಸ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ನಾನಾ ನಿಗಮ ಮಂಡಳಿಗಳ ಅಧ್ಯಕ್ಷರು, ಮುಖಂಡರು ಜೊತೆಯಲ್ಲಿದ್ದರು.