ಹೊಸದಿಗಂತ ವರದಿ,ಶಿವಮೊಗ್ಗ:
ಸ್ವದೇಶಿ ಜಾಗರಣ ಮಂಚ್ ವತಿಯಿಂದ ನಗರದ ವಿನೋಬನಗರ ಶಿವಾಲಯದ ಹಿಂಭಾಗದಲ್ಲಿ ಶನಿವಾರ ನಮ್ಮ ಜಿಲ್ಲೆ ಸ್ವಾವಲಂಬಿ ಜಿಲ್ಲೆ ಪರಿಕಲ್ಪನೆಯಲ್ಲಿ ದೇಸೀ ಸಂತೆಗೆ ಚಾಲನೆ ನೀಡಲಾಯಿತು.
ಸ್ವದೇಶೀ ಜಾಗರಣ ಮಂಚ್ನ ಕ್ಷೇತ್ರೀಯ ಸಂಘಟಕ ಕೆ.ಜಗದೀಶ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಕಾಡುತ್ತಿದೆ. ಅದನ್ನು ಪರಿಹರಿಸಲು ಕೃಷಿ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವುದು ಒಂದೇ ಮಾರ್ಗ ಎಂದು ಪ್ರತಿಪಾದಿಸಿದರು.
ಥಿಂಕ್ ಗ್ಲೋಬಲಿ, ಆ್ಯಕ್ಟ್ ಲೋಕಲಿ ಅಂತ ಮಾತಿದೆ. ನಮ್ಮಲ್ಲಿ ಅದು ಉಲ್ಟಾ ಇದೆ. ಅಮೆರಿಕ ವಸ್ತು ಇಲ್ಲಿದೆ. ನಮ್ಮ ವಸ್ತುಗಳೇ ನಮ್ಮ ಬಳಿ ಇಲ್ಲ ಎಂದರು.
ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ದೇಶವನ್ನು ಕಾಡುತ್ತಿದೆ. ಪ್ರತಿ ವರ್ಷ 1.20 ಕೋಟಿ ಮಂದಿ ಪದವಿ ಪಡೆದು ಹೊರಬಂದರೆ, ಪ್ರತಿ ವರ್ಷ 10 ಲಕ್ಷ ಉದ್ಯೋಗ ಸೃಷ್ಟಿ ಆಗುತ್ತಿದೆ. ಕಾಲೇಜುಗಳು ನಿರುದ್ಯೋಗ ತಯಾರು ಮಾಡುವ ಕಾರ್ಖಾನೆ ಆಗಿವೆ. ಉತ್ತರ ಪ್ರದೇಶದಲ್ಲಿ 368 ಹುದ್ದೆಗೆ 28 ಲಕ್ಷ ಅರ್ಜಿ ಬಂದಿತ್ತು. ಕೊಯಮತ್ತೂರು ಪೌರ ಕಾರ್ಮಿಕ ಹುದ್ದೆಗೆ ಎಂಬಿಎ ಪದವೀ‘ರ, ಬಳ್ಳಾರಿ ಅಡುಗೆ ಹುದ್ದೆಗೆ ಬಿಇ ಪದವಿ ಪಡೆದವರು ಆಯ್ಕೆಯಾದರು ಎಂದು ವಿವರಿಸಿದರು.
ಕೃಷಿಯಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಇದೆ. ದೇಶದಲ್ಲಿ 6.34 ಕೋಟಿ ನೊಂದಾಯಿತ ಗೃಹ, ಸಣ್ಣ ಕೈಗಾರಿಗೆ ಇವೆ. ಸಣ್ಣ ಕೈಗಾರಿಕೆ ಉಳಿದರೆ ನಿರುದ್ಯೋಗ ನಿವಾರಣೆ ಆಗಲಿದೆ. ಇವರಿಗೆ ಪ್ರೋತ್ಸಾಹ ಅಗತ್ಯ ಎಂದರು.
ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ ಹಾಜರಿದ್ದರು.