ಹೊಸದಿಗಂತ ವರದಿ, ಅಂಕೋಲಾ:
ಪೊಲೀಸ್ ಇಲಾಖೆಯ ಸಿ.ಐ.ಡಿ ವಿಭಾಗದಲ್ಲಿ ಡಿ.ವೈ.ಎಸ್. ಪಿ ಯಾಗಿ ಸೇವೆ ಸಲ್ಲಿಸುತ್ತಿರುವ ಅಂಕೋಲಾ ತಾಲೂಕಿನ ಶಿರಗುಂಜಿ ಮೂಲದ ಅಂಜುಮಾಲಾ ನಾಯಕ ಅವರು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ತಾಲೂಕಿನ ಶಿರಗುಂಜಿ ಗ್ರಾಮದ ತಿಮ್ಮಣ್ಣ ನಾಯಕ, ಶಾಂತಿ ದಂಪತಿ ಮಗಳಾಗಿರುವ ಇವರು ಎಂ.ಎಸ್ಸಿ ಮತ್ತು ಗೃಹ ವಿಜ್ಞಾನ ಪದವಿದರೆಯಾಗಿದ್ದು 2001 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಬೆಳಗಾವಿ, ಖಾನಾಪುರ,ಹುಬ್ಬಳ್ಳಿ ಗ್ರಾಮೀಣ, ಬೆಂಗಳೂರು ಮಡಿವಾಳ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ದಕ್ಷ ಸೇವೆ ಮೂಲಕ ಗುರುತಿಸಿಕೊಂಡಿದ್ದು,2008 ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಬಡ್ತಿ ಪಡೆದು ಬೆಂಗಳೂರಿನ ಹಲಸೂರು ಗೇಟ್, ಜಾಲಳ್ಳಿ, ಮಲ್ಲೇಶ್ವರಂ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.2022 ರಲ್ಲಿ ಡಿ.ವೈ.ಎಸ್. ಪಿ ಯಾಗಿ ಬಡ್ತಿ ಪಡೆದ ಅವರು ಬೆಂಗಳೂರಿನ ಸಿ.ಐ.ಡಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರದ ಮುಖ್ಯ ಮಂತ್ರಿಗಳ ಬಂಗಾರದ ಪದಕ, ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಗೌರವ ಸನ್ಮಾನಗಳಿಗೆ ಪಾತ್ರರಾಗಿರುವ ಅಂಜುಮಾಲಾ ನಾಯಕ ಅವರಿಗೆ ಇದೀಗ ರಾಷ್ಟ್ರಪತಿ ಪದಕ ಘೋಷಣೆಯಾಗಿದೆ.