ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಯ ನಡುವೆಯೂ ದೇಶೀಯ ಗ್ರಾಹಕರಿಗೆ ಪೆಟ್ರೋಲ್ ದರದ ಹೊರೆ ಹೆಚ್ಚಾಗದಂತೆ ತಡೆಯಲು E20 ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿ ಪರಿಣಾಮಕಾರಿಯಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ನೀತಿಯಿಂದ ಇಂಧನ ಆಮದು ಅವಲಂಬನೆ ಕಡಿಮೆಯಾಗಿದ್ದು, ಜಾಗತಿಕ ಬಿಕ್ಕಟ್ಟುಗಳ ಪರಿಣಾಮವನ್ನು ದೇಶದ ಮೇಲೆ ತಗ್ಗಿಸಲು ನೆರವಾಗಿದೆ ಎಂದು ತಿಳಿಸಿದೆ.
ಇಂಧನ ಭದ್ರತೆಗೆ ಎಥೆನಾಲ್ ಪ್ರಮುಖ ಅಸ್ತ್ರ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಜಾಗತಿಕ ತೈಲ ಬೆಲೆ ಏರಿಕೆಯ ಸಮಯದಲ್ಲಿ ಎಥೆನಾಲ್ ಮಿಶ್ರಣದಿಂದ ಪೆಟ್ರೋಲ್ ದರದಲ್ಲಿ ದೊಡ್ಡ ಮಟ್ಟದ ಏರಿಕೆ ಸಂಭವಿಸಲಿಲ್ಲ. ಭಾರತ ತನ್ನ ಕಚ್ಚಾ ತೈಲದ ಬಹುಪಾಲನ್ನು ಆಮದು ಮಾಡಿಕೊಳ್ಳುವುದರಿಂದ, ದೇಶೀಯ ಎಥೆನಾಲ್ ಬಳಕೆ ಇಂಧನ ಭದ್ರತೆಯನ್ನು ಬಲಪಡಿಸುವ ಮಹತ್ವದ ಕ್ರಮವಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ:
ಆಹಾರ ಭದ್ರತೆಗೆ ಧಕ್ಕೆಯಿಲ್ಲ ಎಂದ ಸರ್ಕಾರ
E20 ಯೋಜನೆಯಿಂದ ಆಹಾರ ಧಾನ್ಯಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳನ್ನು ಸರ್ಕಾರ ತಳ್ಳಿ ಹಾಕಿದೆ. ಮಾನವ ಬಳಕೆಗೆ ಯೋಗ್ಯವಲ್ಲದ ಹಾನಿಗೊಳಗಾದ ಧಾನ್ಯಗಳು ಹಾಗೂ ಹೆಚ್ಚುವರಿ ಆಹಾರ ಧಾನ್ಯಗಳಿಂದ ಮಾತ್ರ ಎಥೆನಾಲ್ ಉತ್ಪಾದಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ರೈತರಿಗೆ ಹೆಚ್ಚುವರಿ ಆದಾಯ, ವಿದೇಶಿ ತೈಲ ಆಮದು ಕಡಿತ ಹಾಗೂ ಗ್ರಾಹಕರಿಗೆ ಬೆಲೆ ಸ್ಥಿರತೆ ಒದಗಿಸುವಲ್ಲಿ ಈ ನೀತಿ ನೆರವಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.



