ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಸುಳ್ಳು ಮಾಹಿತಿ ಹರಡದಂತೆ ಕೇಂದ್ರ ಸರಕಾರ ಖಡಕ್ ಸೂಚನೆ ನೀಡಿದ್ದು, ಇದೀಗ ಆನ್ಲೈನ್ನಲ್ಲಿ ಪ್ರಸಾರವಾಗುವ ಭಾರತ ವಿರೋಧಿ ನಿಲುವುಗಳು ಮತ್ತು ಸುಳ್ಳು ಮಾಹಿತಿಯ ಮೇಲೆ ನಿಗಾ ಇಡಲು ಕೇಂದ್ರ ಸರ್ಕಾರ ಗೃಹ ಮತ್ತು ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿದೆ.
ಈ ತಂಡವು ಭಾರತೀಯ ಮತ್ತು ವಿದೇಶಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮಾಹಿತಿಯ ಮೇಲೆ ಹದ್ದಿನ ಕಣ್ಣು ಇಡಲಿದೆ. ಸುಳ್ಳು ಮಾಹಿತಿ ಹರಡಿದಲ್ಲಿ ತನಿಖೆ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಹೊರಗಲ್ಲದೆ, ದೇಶದ ಒಳಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡುವುದು ಕಂಡುಬಂದಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಹಲವಾರು ವ್ಯಕ್ತಿಗಳನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು, ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳನ್ನು ನೇರ ಪ್ರಸಾರ ಮಾಡದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲ ಮಾಧ್ಯಮಗಳಿಗೆ ಮಾರ್ಗಸೂಚಿ ಜಾರಿ ಮಾಡಿದೆ.