ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ಕುರಿತು ನಾನು ಮಾತನಾಡಲ್ಲ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.
ಅವರು ಆ ರೀತಿ ನಿರ್ಧಾರ ತೆಗೆದುಕೊಳ್ಳಲು ಕಾರಣ ಕೂಡ ಇದೆ.
‘ತನ್ವಿ: ದಿ ಗ್ರೇಟ್’ ಸಿನಿಮಾಗೆ ಅನುಪಮ್ ಖೇರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮೂಲಕ ಅವರು ಹೊಸ ನಟಿಯನ್ನು ಪರಿಚಯಿಸುತ್ತಿದ್ದಾರೆ. ಅದರ ಸಲುವಾಗಿ ಇಂದು ಸುದ್ದಿಗೋಷ್ಠಿ ನಡೆಸಲಾಯಿತು. ಈ ಸುದ್ದಿಗೋಷ್ಠಿಯಲ್ಲಿಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಪ್ರಶ್ನೆ ಕೇಳಲಾಯಿತು.
‘ಕಾಶ್ಮೀರದಲ್ಲಿ ಆಗಿರುವ ಘಟನೆ ಬಗ್ಗೆ ಮಾತನಾಡಲು ನನಗೆ ಇಷ್ಟ ಇಲ್ಲ. ಯಾಕೆಂದರೆ, ಅದು ತುಂಬ ಮಹತ್ವದ ವಿಷಯ. ಅದಕ್ಕಾಗಿಯೇ ನಾನು ಮೌನಾಚರಣೆ ಮಾಡಿದ್ದೇನೆ. ಆ ವಿಷಯ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಅಂಥ ಗಂಭೀರವಾದ ವಿಚಾರವನ್ನು ಈ ಸುದ್ದಿಗೋಷ್ಠಿಯಲ್ಲಿ ಮಾತನಾಡುವುದು ಸರಿಯಲ್ಲ. ಈಗಾಗಲೇ ನಾನು ಅದರ ಬಗ್ಗೆ 5 ನಿಮಿಷ ವಿಡಿಯೋ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
ವಿಡಿಯೋ ಮೂಲಕ ಅನುಮಪ್ ಖೇರ್ ಅವರು ಪಹಲ್ಗಾಮ್ ಘಟನೆ ಬಗ್ಗೆ ಮಾತನಾಡಿದ್ದರು. ‘ಕಾಶ್ಮೀರದಲ್ಲಿ ಆದ ಹಿಂದುಗಳ ಹತ್ಯಾಕಾಂಡದಿಂದ ತೀವ್ರ ನೋವಾಗಿದೆ. ಜೀವನದುದ್ದಕ್ಕೂ ನಾನು ಇಂಥದ್ದನ್ನೇ ನೋಡಿದ್ದೇನೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ತೋರಿಸಿದ್ದು ಸಣ್ಣ ತುಣುಕು ಅಷ್ಟೇ. ಅದನ್ನು ಹಲವರು ಪ್ರಾಪಗಾಂಡ ಎಂದಿದ್ದರು. ಆದರೆ ಈಗ ಭಾರತದ ಬೇರೆ ಬೇರೆ ಭಾಗದಿಂದ ಕಾಶ್ಮೀರಕ್ಕೆ ಬಂದಿದ್ದ ಜನರ ಧರ್ಮವನ್ನು ಗುರುತಿಸಿ ಕೊಲ್ಲಲಾಗಿದೆ’ ಎಂದು ಅನುಪಮ್ ಖೇರ್ ಹೇಳಿದ್ದರು.
‘ಗಂಡನ ಶವದ ಪಕ್ಕ ಕುಳಿತು ಅಳುತ್ತಿದ್ದ ಮಹಿಳೆಯ ಚಿತ್ರವನ್ನು ನಾನು ಮರೆಯಲು ಸಾಧ್ಯವಿಲ್ಲ. ಪಲ್ಲವಿ ನೀಡಿದ ಸಂದರ್ಶನ ಕೇಳಿದೆ. ತನ್ನನ್ನೂ ಸಾಯಿಸಿ ಅಂತ ಆಕೆ ಕೇಳಿಕೊಂಡಿದ್ದರು. ಆದರೆ ಸಂದೇಶ ತಿಳಿಸು ಅಂತ ಆಕೆಯನ್ನು ಬಿಟ್ಟು ಕಳಿಸಿದರು. ಇದು ತುಂಬ ಕ್ರೂರ ಕೃತ್ಯ’ ಎಂದು ಅನುಮಪ್ ಖೇರ್ ಅವರು ವಿಡಿಯೋದಲ್ಲಿ ಹೇಳಿದ್ದರು.